ಹಾವೇರಿ: ವಾರದ ಹಿಂದೆ ನಗರದಲ್ಲಿ ಬಾಲಕ ತೇಜಸ್ಗೌಡ ಮಲ್ಲಿಕೇರಿ ಕೊಲೆ ಪ್ರಕರಣ ನಡೆದಿತ್ತು. ಈ ಘಟನೆಯ ಬೆನ್ನ ಹಿಂದೆಯೇ ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಜೋಡಿ ಕೊಲೆ ನಡೆದಿದ್ದು, ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.
ಯತ್ತಿನಹಳ್ಳಿ ಗ್ರಾಮದ ನಿಂಗಪ್ಪ ಶಿರಗುಪ್ಪಿ (30) ಮತ್ತು ಗಣೇಶ ಕುಂದಾಪುರ (16) ಕೊಲೆಯಾದವರು. ಮಂಗಳವಾರ ರಾತ್ರಿ ಈ ಇಬ್ಬರು ಸ್ವಂತ ಮಳಿಗೆಯಲ್ಲಿ ಮಲಗಿದ್ದರು. ಆ ಸಂದರ್ಭದಲ್ಲಿ ಮಳಿಗೆಗೆ ನುಗ್ಗಿದ ದುಷ್ಕರ್ಮಿಗಳು ತಲೆಗೆ ಹರಿತವಾದ ಆಯುಧದಿಂದ ಹೊಡೆದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ನಿಂಗಪ್ಪನನ್ನು ಹತ್ಯೆ ಮಾಡಲು ಬಂದ ದುಷ್ಕರ್ಮಿಗಳು ಸಾಕ್ಷಿ ಉಳಿಯಬಾರದು ಎಂಬ ದುರುದ್ದೇಶದಿಂದ ಆತನ ಜತೆಗೆ ಸದಾ ಇರುತ್ತಿದ್ದ ಗಣೇಶ ಎಂಬ ಬಾಲಕನನ್ನು ಹತ್ಯೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ.
ಸಹೋದರಿ ರೋದನ: ‘ಒಂದು ಬಾರಿ ನನಗೆ ಅಣ್ಣನ ಮುಖ ತೋರಿಸಿ’ಎಂದು ನಿಂಗಪ್ಪ ಅವರ ಸಹೋದರಿ ಜ್ಯೋತಿ ರೋದನ ಮಾಡಿದರು. ಆಕೆಯ ಆಕ್ರಂದನ ಕಂಡ ಪೊಲೀಸರು ಮಳಿಗೆಯಲ್ಲಿದ್ದ ಮೃತದೇಹವನ್ನು ನೋಡಲು ಅವಕಾಶ ಮಾಡಿಕೊಟ್ಟರು.ಜ್ಯೋತಿ ಅವರ ಗೋಳಾಟ ಕಂಡು ಅಲ್ಲಿ ಸೇರಿದ್ದ ಜನರು ಮಮ್ಮಲ ಮರುಗಿದರು.
ಘಟನಾ ಸ್ಥಳಕ್ಕೆ ಎಸ್ಪಿ ಕೆ.ಜಿ.ದೇವರಾಜು, ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ವಿಜಯಕುಮಾರ ಸಂತೋಷ, ಇನ್ಸ್ಪೆಕ್ಟರ್ ಪ್ರಹ್ಲಾದ ಚನ್ನಗಿರಿ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದರು. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.