ಹಾವೇರಿ: ರಾಣೆಬೆನ್ನೂರು ತಾಲ್ಲೂಕಿನ ರಾಹುತನಕಟ್ಟಿ ಗ್ರಾಮ ಪಂಚಾಯಿತಿಯ ಪಿಡಿಒ ನಾಗರಾಜ ಕೆ.ಬಿ. ಅವರು ಸುಮಾರು ₹8ರಿಂದ ₹10 ಲಕ್ಷ ಅವ್ಯವಹಾರ ನಡೆಸಿರುವ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಹಾವೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ‘ಜನತಾ ಪಕ್ಷ–ಕರ್ನಾಟಕ ರಾಜ್ಯ’ದ ಮುಖಂಡ ಶಿವಕುಮಾರ ತಳವಾರ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಹುತನಕಟ್ಟಿ ಗ್ರಾಮ ಪಂಚಾಯಿತಿಯಲ್ಲಿ 2019–20ನೇ ಸಾಲಿನ 14ನೇ ಹಣಕಾಸು ಯೋಜನೆಯ 2ನೇ ಕಂತಿನ ಅನುದಾನವನ್ನು ಹಾಗೂ 2019–20ನೇ ಸಾಲಿನ ನಿಧಿ–1ರಲ್ಲಿಯ ಅನುದಾನವನ್ನು ಪಿಡಿಒ ನಾಗರಾಜ ಕೆ.ಬಿ.ಅವರು ಒಂದೇ ಕಾಮಗಾರಿಗೆ ಎರಡು ಬಾರಿ ಬಿಲ್ಲುಗಳನ್ನು ತೆಗೆದು ಘನ ತ್ಯಾಜ್ಯ ವಿಲೇವಾರಿ ಮಾಡದೇ ಹಣ ಡ್ರಾ ಮಾಡಿಕೊಂಡಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ ಎಂದರು.
ಕಾಮಗಾರಿಗಳನ್ನು ಮಾಡಿರುವದಾಗಿ ಬಿಲ್ಲುಗಳನ್ನು ತೆಗೆದು ಕೆಲಸ ನಿರ್ವಹಿಸಿದ ವ್ಯಕ್ತಿಗಳಿಗೆ ಸಂದಾಯ ಮಾಡದೇ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗೂಲಿ ನೌಕರನ ಹೆಸರಿನಲ್ಲಿ ಹಣ ಡ್ರಾ ಮಾಡಿ ಸ್ವಂತಕ್ಕೆ ಬಳಸಿಕೊಂಡು ಸಾಕಷ್ಟು ಅಕ್ರಮ ಎಸಗಿರುತ್ತಾರೆ. ಅಲ್ಲದೆ ಗ್ರಾಮ ಪಂಚಾಯಿತಿ ಹಿಂದಿನ ಅಧ್ಯಕ್ಷರ ಅವಧಿ ಮುಗಿದ ನಂತರವೂ ಅವರ ಸಹಿ ಪಡೆದು ನಿಯಮ ಉಲ್ಲಂಘಿಸಿ ಅವ್ಯವಹಾರ ಮಾಡಿರುತ್ತಾರೆ ಎಂದು ಆರೋಪಿಸಿದರು.
ಪಿಡಿಒ ನಾಗರಾಜ ಹಾಗೂ ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರು ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರ ವಿರುದ್ಧ ಎಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದರು.