ಹಾವೇರಿ: ‘ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಜೊತೆಗೆ ನನಗೆ ಉತ್ತಮ ಬಾಂಧವ್ಯ ಇದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗುರುವಾರ ಬೆಳಿಗ್ಗೆ ಹಾವೇರಿಗೆ ಬಂದ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ಅಧಿಕಾರಕ್ಕೆ ಬಂದ ಮೊದಲ ನೂರು ದಿನವನ್ನು ಅತಿವೃಷ್ಟಿ ಪರಿಹಾರಕಾರ್ಯಾಚರಣೆಯಲ್ಲೇ ಕಳೆದಿದ್ದೇನೆ. ನೀರಾವರಿ ಸೌಲಭ್ಯ ಒದಗಿಸುವುದು, ರೈತರ ಬೆಳೆಗೆ ಬೆಂಬಲ ಬೆಳೆ ನೀಡುವುದು ಸೇರಿದಂತೆ ಮುಂದಿನ ದಿನಗಳಲ್ಲಿ ರೈತಪರ ಕಾರ್ಯಗಳಿಗೆ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತೇನೆ’ ಎಂದರು.
‘ರೈತರು ವಿರೋಧ ಪಕ್ಷದವರ ಉಡಾಫೆ ಮಾತುಗಳನ್ನು ಕೇಳಿ ಬೇಸರ ಪಡುವುದು ಬೇಡ. ನಿಮ್ಮ ಜತೆ ನಾವು ಸದಾ ಇದ್ದೇ ಇರುತ್ತೇವೆ. ಅಧಿಕಾರಕ್ಕೆ ಬಂದ ದಿನದಿಂದಲೂ ರೈತರಿಗೆ ಕೈಮೀರಿ ನೆರವು ನೀಡುತಿದ್ದೇವೆ’ ಎಂದೂ ಹೇಳಿದರು.
‘ನಾನು ಇಲ್ಲಿ ರಾಜಕೀಯದ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಆದರೆ, ದೇವೇಗೌಡರ ಜತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದೇವೆ ಎಂದಷ್ಟೇ ಹೇಳುತ್ತೇನೆ’ ಎಂದ ಯಡಿಯೂರಪ್ಪ, ‘ಪಾಪಾ ಸಿದ್ದರಾಮಯ್ಯ ಅವರು ನನ್ನ ಬಗ್ಗೆ ತುಂಬ ಚಿಂತೆ ಮಾಡುತಿದ್ದಾರೆ’ ಎಂದೂ ವ್ಯಂಗ್ಯ ಮಾಡಿದರು.