ಬೆಂಗಳೂರು: ‘ಆಸ್ತಿ ವ್ಯಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಡೆಸುತ್ತಿದ್ದೇನೆ’ ಎಂದು ಸುಳ್ಳು ಹೇಳಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಕಲಿ ವಕೀಲನನ್ನು ವಕೀಲರೇ ಹಿಡಿದು ಸೋಮವಾರ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಕೀಲರಂತೆ ಕಪ್ಪುಕೋಟುಧರಿಸಿ, ನಗರದ ಮೇಯೊಹಾಲ್ ಕೋರ್ಟ್ ಆವರಣದಲ್ಲಿ ಸಾರ್ವಜನಿಕರನ್ನು ಸಂಪರ್ಕಿಸಿ, ವಂಚಿಸಲು ಸಂಚು ಹಾಕುತ್ತಿದ್ದ ಸೂರ್ಯಪ್ರಕಾಶ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಈತನ ನಡೆಯಿಂದ ಅನುಮಾನಗೊಂಡ ವಕೀಲರು ಕೋರ್ಟ್ ಆವರಣದಲ್ಲಿಯೇ ಹಿಡಿದು ಪ್ರಶ್ನಿಸಿದಾಗ, ತಾನು ವಕೀಲ ಅಲ್ಲ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ವಕೀಲರು ನೀಡಿದ ದೂರಿನ ಅನ್ವಯ, ಅಶೋಕನಗರ ಪೊಲೀಸರು ಸೂರ್ಯಪ್ರಕಾಶನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.