ಹಾವೇರಿ: ‘ಸಹಸ್ರಾರು ವರ್ಷಗಳಿಂದ ಬಂಧನದಲ್ಲಿ ಬಾಳುತ್ತಿದ್ದ ಸ್ತ್ರೀ ಕುಲಕ್ಕೆ ಗೌರವದ ಸ್ಥಾನಮಾನ ತಂದುಕೊಡುವ ಮುಖಾಂತರ ಮಹಿಳೆಯರು ಸಮಾಜದ ಎಲ್ಲ ಸ್ತರಗಳಲ್ಲಿಯೂ ಪುರುಷರಿಗೆ ಸಮಾನವಾಗಿ ನಿಲ್ಲಬಲ್ಲರು’ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಿದ ಧೀರ ಮಹಿಳೆ ಅಕ್ಕಮಹಾದೇವಿ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ನಗರದ ಹೊಸಮಠದಲ್ಲಿ ಬುಧವಾರ ಅಕ್ಕಮಹಾದೇವಿ ಜಯಂತಿಯನ್ನು ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಅಕ್ಕಮಹಾದೇವಿಯು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹೀಗೆ ಎಲ್ಲ ವಲಯಗಳಲ್ಲಿ ಮಹಿಳಾ ಛಾಪನ್ನು ಬಿಂಬಿಸಿದರು.ಮಹಿಳಾ ಸಮಾಜದ ಮೇರುಪರ್ವತವಾಗಿ ಬೆಳಗಿದರು. ಓಡುವ ಮನಸ್ಸನ್ನು ನಿಲ್ಲಿಸಿದ ಅಕ್ಕ ನಿರಾಕಾರ ದೇವನ ಸತಿಯಾದಳು ಎಂದು ಬಣ್ಣಿಸಿದರು.
‘ಲೋಕದ ಎಲ್ಲ ಕ್ರಿಯೆಗಳಿಗೆ ಸೂರ್ಯನೇ ಬೀಜವಾಗಿದ್ದಾನೆ. ಸೂರ್ಯನ ಉದಯ ಹಾಗೂ ಅಸ್ತಮಗಳೆರಡೂ ಜಗತ್ತಿನ ಮೇಲೆ ಬಹಳ ಪರಿಣಾಮ ಬೀರುತ್ತವೆ. ಸೂರ್ಯನ ಉದಯವು ಜಗದ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಸೂರ್ಯನ ಬೆಳಕಿನಲ್ಲಿ ಸಕಲ ಜೀವಿಗಳ ಬದುಕು ಮತ್ತು ಭವಿಷ್ಯವಡಗಿದೆ ಎಂದು ಅಕ್ಕಮಹಾದೇವಿ ತಮ್ಮ ವಚನದಲ್ಲಿ ತಿಳಿಸಿದ್ದಾರೆ’ ಎಂದು ಹೇಳಿದರು.
ಕಮಲಾ ಬುಕ್ಕಶೆಟ್ಟಿ, ಸುನೀತಾ ಮಠದ, ನಾಗವೇಣಿ ಮುಂದಲಮನಿ, ಸುಜ್ಞಾನಿದೇವಿ ಮಠ ಇದ್ದರು.ಈ ಸಂದರ್ಭದಲ್ಲಿ ಮಾಸ್ಕ್ ವಿತರಣೆ ಮಾಡಿ, ‘ಸಾಮಾಜಿಕ ಅಂತರ’ದ ಬಗ್ಗೆ ಜಾಗೃತಿ ಮೂಡಿಸಲಾಯಿತು.