ಹಾವೇರಿ: ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ ಪೌರಾಡಳಿತ ಸಚಿವ ನಾರಾಯಣಗೌಡ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ್ರು) ಆಗ್ರಹಿಸಿ ಶುಕ್ರವಾರ ನಗರದ ಸಂಗೂರ ಕರಿಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕಾರ್ಯಕರ್ತರು ಸಚಿವರ ವಿರುದ್ಧ ಜೈಕಾರ ಕೂಗಿ ಆಕ್ರೋಶ ಹೊರ ಹಾಕಿದರು. ಬಳಿಕ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಸತೀಶಗೌಡ ಮುದಿಗೌಡ್ರ ಮಾತನಾಡಿ, ಸಚಿವ ನಾರಾಯಣಗೌಡ ಓಟ್ಬ್ಯಾಂಕ್ ರಾಜಕೀಯಕ್ಕಾಗಿ ಕರ್ನಾಟಕವನ್ನು ಕಡೆಗಣಿಸುತ್ತಿದ್ದಾರೆ. ನಾಡ ದ್ರೋಹಿ ಹೇಳಿಕೆಗಳನ್ನು ನೀಡುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದ್ದಾರೆ ಎಂದರು.
ಸಚಿವರಿಗೆ ಮಹಾರಾಷ್ಟ್ರದ ಬಗ್ಗೆ ಮಮಕಾರವಿದ್ದರೆ ರಾಜೀನಾಮೆ ನೀಡಿ ಅಲ್ಲಿಯೇ ರಾಜಕಾರಣ ನಡೆಸಲಿ. ಅಲ್ಲೇಶಾಸಕರಾಗಿ ಗೆದ್ದು ಮಂತ್ರಿಯಾಗಲಿ. ಕರ್ನಾಟಕದಲ್ಲಿದ್ದು, ಮಹಾರಾಷ್ಟ್ರಕ್ಕೆ ಜೈಕಾರ ಕೂಗಿದರೆ ನಮ್ಮಿಂದ ಸಹಿಸಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್ನಲ್ಲಿದೆ. ಮಹಾರಾಷ್ಟ್ರದ ರಾಜಕಾರಣಿಗಳು ಪದೇ ಪದೇ ಗಡಿ ವಿವಾದವನ್ನು ಕೆಣಕುತ್ತ ಬೆಳಗಾವಿಯಲ್ಲಿ ಗಲಭೆ ಎಬ್ಬಿಸಲು ಸಂಚು ನಡೆಸುತ್ತಲೇಬಂದಿದ್ದಾರೆ ಎಂದು ಆರೋಪಿಸಿದರು.