ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ₹25 ಕೋಟಿ ವೆಚ್ಚ!

₹5 ಕೋಟಿ ಹೆಚ್ಚುವರಿ ಅನುದಾನಕ್ಕೆ ಸಿಎಂಗೆ ಪ್ರಸ್ತಾವ: ₹2.55 ಕೋಟಿ ಜಿಎಸ್‌ಟಿ!
Last Updated 27 ಫೆಬ್ರುವರಿ 2023, 23:45 IST
ಅಕ್ಷರ ಗಾತ್ರ

ಹಾವೇರಿ: ಜನವರಿ 6,7 ಮತ್ತು 8ರಂದು ಇಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರೋಬ್ಬರಿ ₹25 ಕೋಟಿ ವೆಚ್ಚವಾಗಿದೆ. ಇದುಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ದಾಖಲೆಯ ವೆಚ್ಚ ಎನಿಸಿದೆ.

ಸರ್ಕಾರ ಈ ಹಿಂದೆ, ಮೈಸೂರಿನಲ್ಲಿ ನಡೆದಿದ್ದ 83ನೇ ಸಾಹಿತ್ಯ ಸಮ್ಮೇಳನಕ್ಕೆ ₹8 ಕೋಟಿ, ಧಾರವಾಡದಲ್ಲಿ ನಡೆದಿದ್ದ 84ನೇ ಸಾಹಿತ್ಯ ಸಮ್ಮೇಳನಕ್ಕೆ ₹10 ಕೋಟಿ ಹಾಗೂ ಕಲಬುರಗಿಯಲ್ಲಿ ನಡೆದಿದ್ದ 85ನೇ ಸಾಹಿತ್ಯ ಸಮ್ಮೇಳನಕ್ಕೆ ₹14 ಕೋಟಿ ಅನುದಾನ ನೀಡಿತ್ತು.

‘ಸಿಎಂ ತವರು ಜಿಲ್ಲೆ’ಯಲ್ಲಿ ನಡೆದ ನುಡಿಜಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ₹20 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಇದು ಕಳೆದ 85 ಸಮ್ಮೇಳನಗಳಿಗೆ ನೀಡಿದ್ದ ಅನುದಾನದಲ್ಲೇ ಗರಿಷ್ಠ ಮೊತ್ತವಾಗಿತ್ತು. ಆದರೆ, ಈ ಮೊತ್ತವನ್ನೂ ಮೀರಿ ₹5 ಕೋಟಿ ಹೆಚ್ಚುವರಿ ಹಣ ಖರ್ಚು ಮಾಡಲಾಗಿದೆ.

ವೇದಿಕೆ ನಿರ್ಮಾಣಕ್ಕೆ ₹ 5 ಕೋಟಿ, ವಸತಿ ವ್ಯವಸ್ಥೆಗೆ ₹ 2 ಕೋಟಿ, ಸಾರಿಗೆ ವ್ಯವಸ್ಥೆಗೆ ₹ 89 ಲಕ್ಷ, ವಿದ್ಯುತ್‌ ಅಲಂಕಾರಕ್ಕೆ ₹ 33 ಲಕ್ಷ, ಕನ್ನಡ ರಥ ಸಂಚಾರಕ್ಕೆ ₹ 25 ಲಕ್ಷ, ಸಾಂಸ್ಕೃತಿಕ ತಂಡಗಳಿಗೆ ₹ 62 ಲಕ್ಷ, ಮೆರವಣಿಗೆಗೆ ₹ 37 ಲಕ್ಷ.. ಹೀಗೆ ವಿವಿಧ ಸಮಿತಿಗಳು ಖರ್ಚಿನ ಪಟ್ಟಿಯನ್ನು ಸಲ್ಲಿಸಿವೆ.

ಆಹಾರಕ್ಕೆ ₹8 ಕೋಟಿ:

ಕೆಲ ಸಮಿತಿಗಳು ನಿಗದಿಪಡಿಸಿದ್ದ ಮೊತ್ತಕ್ಕಿಂತ ಹೆಚ್ಚು ಖರ್ಚು ಮಾಡಿವೆ. ಆಹಾರ ಸಮಿತಿಗೆ ₹5 ಕೋಟಿ ನಿಗದಿಪಡಿಸಲಾಗಿತ್ತು. ಆದರೆ, ₹8 ಕೋಟಿ ಖರ್ಚಾಗಿದೆ ಎಂದು ಜಿಲ್ಲಾಡಳಿತಕ್ಕೆ ವಿವರ ಸಲ್ಲಿಸಲಾಗಿದೆ. ‘ನಿರೀಕ್ಷೆಗಿಂತ ಹೆಚ್ಚು ಜನ ಸಮ್ಮೇಳನಕ್ಕೆ ಬಂದ ಕಾರಣ ₹3 ಕೋಟಿ ಹೆಚ್ಚುವರಿ ಹೊರೆಯಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.

ಅದೇ ರೀತಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ₹75 ಲಕ್ಷ ಹೆಚ್ಚುವರಿ ಅನುದಾನ ಕೋರಿದೆ. ಸಾಂಸ್ಕೃತಿಕ ತಂಡಗಳ ಆಯ್ಕೆ ಸಮಿತಿಗೆ ಹೆಚ್ಚುವರಿಯಾಗಿ ₹20 ಲಕ್ಷ , ನೀರು ಪೂರೈಕೆಗೆ ಹೆಚ್ಚುವರಿಯಾಗಿ ₹16 ಲಕ್ಷ... ಹೀಗೆ ವಿವಿಧ ಸಮಿತಿಗಳು ಹೆಚ್ಚುವರಿ ಖರ್ಚಿನ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿವೆ.

₹2.55 ಕೋಟಿ ಜಿಎಸ್‌ಟಿ!: ವಿವಿಧ ಸಮಿತಿಗಳಿಗೆ ಹಂಚಿಕೆಯಾಗಿದ್ದ ಅನುದಾನದ ಮೇಲೆ ಶೇ 5ರಿಂದ ಶೇ 18ರವರೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಾಕಲಾಗಿದ್ದು, ಬರೋಬ್ಬರಿ ₹2.55 ಕೋಟಿ ಜಿಎಸ್‌ಟಿಗೆ ಖರ್ಚಾಗಿದೆ. ಎಂಸಿಎ ಸೇವಾ ಶುಲ್ಕ (ಶೇ 5ರಂತೆ) ಒಟ್ಟು ₹92 ಲಕ್ಷ ತಗುಲಿದೆ.

ಆದಾಯ ಕಡಿತ: ಸಮ್ಮೇಳನಕ್ಕೆ 20 ಸಾವಿರ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿ, ₹1 ಕೋಟಿ ಪ್ರತಿನಿಧಿ ಶುಲ್ಕದ ಆದಾಯ ನಿರೀಕ್ಷಿಸಲಾಗಿತ್ತು. ಆನ್‌ಲೈನ್‌ ನೋಂದಣಿಯ ತಾಂತ್ರಿಕ ತೊಡಕು ಮತ್ತು ಕಸಾಪ ಸದಸ್ಯತ್ವ ಕಡ್ಡಾಯ ನಿಯಮಗಳಿಂದ ಕೇವಲ 10 ಸಾವಿರ ಪ್ರತಿನಿಧಿಗಳಷ್ಟೇ ಬಂದರು. ಇದರಿಂದ ₹50 ಲಕ್ಷ ಆದಾಯ ತಗ್ಗಿತು. ಸರ್ಕಾರಿ ನೌಕರರ ಒಂದು ದಿನದ ವೇತನದಿಂದ ಅಂದಾಜು ₹1.40 ಕೋಟಿ ಆದಾಯ ಬರಬೇಕಿತ್ತು. ಆದರೆ, ಬಂದದ್ದು ₹20 ಲಕ್ಷ ಮಾತ್ರ ಎನ್ನುತ್ತಾರೆ ಅಧಿಕಾರಿಗಳು.

***

ಹಾವೇರಿಯಲ್ಲಿ ಮಾದರಿ ಸಾಹಿತ್ಯ ಸಮ್ಮೇಳನ ಮಾಡಿದ್ದೇವೆ. ₹5 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಸಿಎಂಗೆ ಪ್ರಸ್ತಾವ ಸಲ್ಲಿಸಲಾಗುವುದು
– ಶಿವರಾಮ ಹೆಬ್ಬಾರ್‌, ಜಿಲ್ಲಾ ಉಸ್ತುವಾರಿ ಸಚಿವ

***

₹20 ಕೋಟಿಯಲ್ಲೇ ಸಮ್ಮೇಳನ ನಡೆಸಲು ಯೋಜನೆ ರೂಪಿಸಲಾಗಿತ್ತು. ನಿರೀಕ್ಷೆಗೂ ಮೀರಿ ಜನ ಬಂದ ಕಾರಣ ಆಹಾರಕ್ಕೆ ಹೆಚ್ಚುವರಿ ₹3 ಕೋಟಿ ಖರ್ಚು ತಗುಲಿದೆ.
– ರಘುನಂದನಮೂರ್ತಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT