ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಹೊಣೆಗಾರಿಕೆ ಮರೆತರೆ ಸಂಕಷ್ಟ: ಪ್ರಾಧ್ಯಾಪಕ ಡಾ. ಬಿ.ಕೆ. ರವಿ

‘ಮಾಧ್ಯಮ: ಹೊಸತನ ಮತ್ತು ಆವಿಷ್ಕಾರಗಳು’ ಗೋಷ್ಠಿಯಲ್ಲಿ ಡಾ. ಬಿ.ಕೆ. ರವಿ ಅಭಿಪ್ರಾಯ
Last Updated 7 ಜನವರಿ 2023, 20:03 IST
ಅಕ್ಷರ ಗಾತ್ರ

ಹಾವೇರಿ (ಕನಕ- ಶರೀಫ- ಸರ್ವಜ್ಞ ವೇದಿಕೆ): ‘ಸಾಮಾಜಿಕ ಹೊಣೆಗಾರಿಕೆ ಮರೆತರೆ ಮಾಧ್ಯಮಕ್ಕೆ ಸಂಕಷ್ಟದ ದಿನಗಳು ಎದುರಾಗುತ್ತವೆ. ಮುಂದೊಂದು ದಿನ ಸರ್ಕಾರದ ಕೈಗೊಂಬೆಯಾಗುವ ದಿನವೂ ಬರಬಹುದು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಬಿ.ಕೆ. ರವಿ ಮಾರ್ಮಿಕವಾಗಿ ಹೇಳಿದರು.

‘ಮಾಧ್ಯಮ: ಹೊಸತನ ಮತ್ತು ಆವಿಷ್ಕಾರಗಳು’ ಗೋಷ್ಠಿಯಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು, ‘ವಾಣಿಜ್ಯೀಕರಣ ಮತ್ತು ಹೊಸ ತಂತ್ರಜ್ಞಾನಗಳ ಭರಾಟೆಯ ನಡುವೆಯೂ ಮಾಧ್ಯಮ ಕ್ಷೇತ್ರ ಏರುಗತಿಯಲ್ಲಿ ಸಾಗುತ್ತಿದೆ. ಮುಂದಿನ ಪೀಳಿಗೆಗೆ ಕಾರ್ಯಸೂಚಿ ಕೊಡುವ ಶಕ್ತಿ ಮಾಧ್ಯಮಕ್ಕಿದೆ.‌ ಆದರೆ, ಅಂಕೆ ಮೀರದಂತೆ ‌ಸ್ವಯಂ ನಿಯಂತ್ರಣ ಹಾಕಿಕೊಂಡು ಸಾಗಬೇಕು’ ಎಂದರು.

‘ಕಾಲಕ್ಕೆ ತಕ್ಕಂತೆ ಬದಲಾಗುವ ತಂತ್ರಜ್ಞಾನ ಮತ್ತು ಪ್ರಯೋಗವು ಹೊಸ ಅಲೆಗಳನ್ನು ಸೃಷ್ಟಿಸುತ್ತದೆ. ತಂತ್ರಜ್ಞಾನ ಸಂದೇಶ ರವಾನೆಯನ್ನು ತ್ವರಿತಗೊಳಿಸಿದೆ. ಮಾಧ್ಯಮ ಕ್ಷೇತ್ರದಲ್ಲಿ ಹಲವು ಬದಲಾವಣೆಗಳಾದರೂ, ಮೂಲ ಸಂವಹನ ಕ್ರಿಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ’ ಎಂದರು.

‘ಓದುಗರನ್ನು, ವೀಕ್ಷಕರನ್ನು ಅಥವಾ ಕೇಳುಗರನ್ನು ಹಿಡಿದಿಡಬೇಕಾದ ಸವಾಲು ಮಾಧ್ಯಮಕ್ಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಭಾಷಾ ಪತ್ರಿಕೆಗಳ ಪ್ರಸಾರ ಸಂಖ್ಯೆ ಹೆಚ್ಚಾಗಿದೆ. ಮುದ್ರಣ ಮಾಧ್ಯಮದ ಭವಿಷ್ಯ ಸ್ಥಿರವಾಗಿದೆ. ಅದಕ್ಕಾಗಿ, ಹಲವು ರೀತಿಯ ಪ್ರಯೋಗಗಳು ನಡೆಯುತ್ತಿವೆ’ ಎಂದು ಹೇಳಿದರು.

‘ಡಿಜಿಟಲ್ ಮಾಧ್ಯಮದ ಮುಂದಿನ ಸವಾಲುಗಳು’ ವಿಷಯ ಕುರಿತು ಮಾತನಾಡಿದ ಡಾ.‌ ಸಿಬಂತಿ ಪದ್ಮನಾಭ, ‘2000ದ ನಂತರ ಮಾಧ್ಯಮದ ಪರಿಕಲ್ಪನೆ ಬದಲಾಗಿದೆ. ವಿಶ್ವದ ಶೇ 60ರಷ್ಟು ಮಂದಿ ಡಿಜಿಟಲ್ ಮಾಧ್ಯಮವನ್ನು ಸುದ್ದಿಗಾಗಿ ಅವಲಂಬಿಸಿದ್ದಾರೆ. ಭಾರತದಲ್ಲಿ ಇನ್ನೂ ಹೆಚ್ಚು. ಅಗ್ಗವಾಗಿರುವ ಇಂಟರ್ನೆಟ್ ಕೂಡ ಇದಕ್ಕೆ ಕಾರಣ’ ಎಂದರು.

‘ಮೊಬೈಲ್ ಇರುವವರೆಲ್ಲರೂ ಪತ್ರಕರ್ತ ಎಂಬ ಟ್ರೆಂಡ್ ಈಗ ಶುರುವಾಗಿದೆ. ಯಾರ ಅಂಕೆಗೂ ಒಳಪಡೆದೆ ಸುದ್ದಿ ಮಾಡಬಹುದಾಗಿದೆ. ಇದಕ್ಕೆ ನಿಯಂತ್ರಣ ಹೇಗೆ? ಆಗ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಎದುರಾಗುತ್ತದೆ. ಅದು ಕಾನೂನಾತ್ಮಕವಾಗಿರಬೇಕೇ ಅಥವಾ ವ್ಯಕ್ತಿಗತವಾಗಿರಬೇಕೇ? ಜನಸಮುದಾಯದ ವಿಶ್ವಾಸಾರ್ಹತೆ ಗಳಿಸದ ಮಾಧ್ಯಮಕ್ಕೆ ಹೆಚ್ಚು ಉಳಿಗಾಲವಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಕ್ಷುಲ್ಲಕ ಸುದ್ದಿಗಳಿಗೂ ಮಹತ್ವ’

‘ಸಾಂಪ್ರದಾಯಿಕ ಪತ್ರಿಕಾ ಮಾಧ್ಯಮ ಮತ್ತು ಟಿ.ವಿ ಮಾಧ್ಯಮದಲ್ಲಿ ಸುದ್ದಿಗಳಿಗೆ ಮೂರ್ನಾಲ್ಕು ಹಂತಗಳಲ್ಲಿ ಜರಡಿ ಹಿಡಿದು ಪ್ರಕಟಿಸುವ ವ್ಯವಸ್ಥೆ ಇದೆ. ಡಿಜಿಟಲ್ ಮಾಧ್ಯಮದಲ್ಲಿ ಅದಿಲ್ಲ. ಕ್ಷುಲ್ಲಕ ಸುದ್ದಿಗಳು ಇಲ್ಲಿ ಮಹತ್ವ ಪಡೆಯುತ್ತಿವೆ. ಇದು ಆತಂಕಕಾರಿ ಬೆಳವಣಿಗೆಯೇ ಅಥವಾ ಸಹಜವೋ ಎಂಬುದರ ಅಧ್ಯಯನ ನಡೆಯಬೇಕಿದೆ’ ಎಂದು ಡಾ. ಸಿಬಂತಿ ಪದ್ಮನಾಭ ಅಭಿಪ್ರಾಯಪಟ್ಟರು.

‘ಡಿಜಿಟಲ್ ಸುದ್ದಿ ಸಂತೆಯಲ್ಲಿ ನಂಬಬೇಕಾದ ಹಾಗೂ ನಂಬಬಾರದ ಸುದ್ದಿ ಯಾವುದು ಎಂಬ ಗೊಂದಲವಿದೆ.‌ ಡಿಜಿಟಲ್ ಮಾಧ್ಯಮವನ್ನು ಸುಳ್ಳು ಸುದ್ದಿಗಳ ಫ್ಯಾಕ್ಟರಿ ಎಂದು ಸಹ ಕರೆಯಲಾಗುತ್ತದೆ. ಮಾಧ್ಯಮದಲ್ಲಿ ಬರುವುದೆಲ್ಲವೂ ಸತ್ಯ ಎಂಬ ‌‌ಮಾತನ್ನು ಅಣಕಿಸುವಂತಿವೆ ಇಲ್ಲಿನ ಸುದ್ದಿಗಳು’ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ಮೋಹನ ಹೆಗಡೆ ಆಶಯ ನುಡಿಗಳನ್ನಾಡಿದರು. ‘ಮುದ್ರಣ ಮಾಧ್ಯಮದಲ್ಲಿ ಕನ್ನಡದ ಬಳಕೆ’ ಕುರಿತು ಸುದರ್ಶನ್ ಚನ್ನಂಗಿಹಳ್ಳಿ ಹಾಗೂ ‘ಸಾಮಾಜಿಕ ಜಾಲತಾಣಗಳು: ಅರಿವು ಮತ್ತು ಅಪಾಯ’ ಕುರಿತು ಎಚ್‌.ಎನ್. ಸುದರ್ಶನ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT