ಹಾವೇರಿ: ಹಾನಗಲ್ ರಸ್ತೆಯಲ್ಲಿರುವ ಎಪಿಎಂಸಿ ಆವರಣದ ಸಿದ್ಧಲಿಂಗೇಶ್ವರ ಟ್ರೇಡರ್ಸ್ ಗೋದಾಮಿನ ಮೇಲೆ ದಾವಣಗೆರೆಯ ಐಜಿ ಸ್ಕ್ವಾಡ್ ಮತ್ತು ಹಾವೇರಿ ಆಹಾರ ಇಲಾಖೆ ಅಧಿಕಾರಿಗಳು ಬುಧವಾರ ಜಂಟಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಿದ್ದ 254 ಕ್ವಿಂಟಲ್ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.
₹3.80 ಲಕ್ಷ ಮೌಲ್ಯದ ‘ಅನ್ನಭಾಗ್ಯ’ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಐಜಿ ಸ್ಕ್ವಾಡ್ ಪಿಎಸ್ಐ ಸಿದ್ದಾರೂಢ ಬಡಿಗೇರ ಮತ್ತು ಆಹಾರ ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಿಕೆ ನೇತೃತ್ವದಲ್ಲಿ ದಾಳಿ ನಡೆಯಿತು.
ಗೋದಾಮಿನ ಮಾಲೀಕ ಶಿವಯೋಗಿ ಪಟ್ಟಣಶೆಟ್ಟಿ, ಸಹಾಯಕ ರವಿ ನಾಗನೂರ ಹಾಗೂ ಲಾರಿ ಚಾಲಕ ಶಿವ ಕರುಗಲ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.