ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ವೇಣುಗೋಪಾಲಸ್ವಾಮಿ ರಥೋತ್ಸವ

Last Updated 3 ಫೆಬ್ರುವರಿ 2018, 6:25 IST
ಅಕ್ಷರ ಗಾತ್ರ

ದೇವನಹಳ್ಳಿ: ಪಟ್ಟಣದ ಐತಿಹಾಸಿಕ ಕೋಟೆ ಶ್ರೀವೇಣುಗೋಪಾಲಸ್ವಾಮಿ ಬ್ರಹ್ಮ ರಥೋತ್ಸವ ಸಂಭ್ರಮಾಚರಣೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ವಾರ್ಷಿಕ ಬ್ರಹ್ಮರಥೋತ್ಸವಕ್ಕಾಗಿ ಕಳೆದ ಒಂದು ವಾರದಿಂದ ಸೂರ್ಯ ಮಂಡಲೋತ್ಸವ, ಶೇಷವಾಹನೋತ್ಸವ, ಮೃತ್ತಿಕ ಸಂಗ್ರಹಣ, ಆಂಕುರಾರ್ಪಣ, ಅರವಟಿಗೆ ಸೇವೆ, ಧ್ವಜಾರೋಹಣ, ಪೀಠೋತ್ಸವ, ಹನುಮಂತ ವಾಹನೋತ್ಸವ, ಸಿಂಹ ವಾಹನೋತ್ಸವ, ಬಳೆ ತೊಡಿಸುವ ಶಾಸ್ತ್ರ, ಉಯ್ಯಾಲೋತ್ಸವ, ಕಲ್ಯಾಣೋತ್ಸವ ಮತ್ತು ಗರುಡೋತ್ಸವ ನಡೆದ ನಂತರ ಗಜೇಂದ್ರ ಮೋಕ್ಷ ಸೇರಿದಂತೆ ಪ್ರತಿನಿತ್ಯ ದ್ವಿಕಾಲ ಸೇವೆ, ಪೂಜಾ ವಿಧಿವಿಧಾನಗಳು ನಡೆದವು.

ಬ್ರಹ್ಮರಥೋತ್ಸವ ದಿನದ ಶುಕ್ರವಾರ ಬೆಳಿಗ್ಗೆ ಸುಪ್ರಭಾತ ಸೇವೆ, ದೇವರಿಗೆ ತೋಮಾಲೆ ಸೇವೆ, ನವಗ್ರಹ ಪೂಜೆ, ರಥದ ಮುಂದೆ ಓಲಗದ ಸೇವೆ ನಡೆಯಿತು. ಮುಜರಾಯಿ ಇಲಾಖೆ ಅಧಿಕಾರಿ ಹಾಗೂ ತಹಶೀಲ್ದಾರ್ ಎಂ.ರಾಜಪ್ಪ ರಥೋತ್ಸವಕ್ಕೆ ಭಕ್ತರ ಸಮ್ಮುಖದಲ್ಲಿ ಚಾಲನೆ ನೀಡಿದರು. ಖಜಾನೆಯಲ್ಲಿ ಭದ್ರವಾಗಿರಿಸಲಾಗಿದ್ದ ನವರತ್ನ ಖಚಿತ ಕಿರೀಟ ಮತ್ತು ವಿಶೇಷ ಅಭರಣಗಳನ್ನು ಪೊಲೀಸ್ ಭದ್ರತೆಯೊಂದಿಗೆ ದೇವಾಲಯಕ್ಕೆ ತರಲಾಯಿತು.

ವೇದ ಮಂತ್ರ ಪಠಣದ ನಡುವೆ ಜಯಘೋಷದೊಂದಿಗೆ ಶುಭ ಮೂಹೂರ್ತದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇದಕ್ಕಾಗಿಯೇ ಮೂರು ದಿನಗಳಿಂದ ಪಟ್ಟಣದಲ್ಲಿ ಸಿದ್ಧತೆ ಮಾಡಿಕೊಂಡಿದ್ದ ಮಹಿಳೆಯರು ಬೆಳಿಗ್ಗೆಯಿಂದಲೇ ಮನೆಗಳ ಮುಂದೆ ರಂಗೋಲಿಯಿಂದ ಸಿಂಗರಿಸಿ ಬಿಡಿ ಹೂಗಳಿಂದ ಅಲಂಕರಿಸಿದ್ದರು. ಅಲ್ಲದೆ, ಹಣ್ಣು ಕಾಯಿ, ದವನ ಸೇರಿದಂತೆ ಪೂಜೆಗೆ ಅವಶ್ಯ ಎನಿಸಿದ ಪ್ರತಿಯೊಂದು ಸಾಮಗ್ರಿಯೊಂದಿಗೆ ರಥೋತ್ಸವ ಸಂದರ್ಭದಲ್ಲಿ ಹಾಜರಿದ್ದರು.

ಮಂಡಕ್ಕಿ ಬತಾಸು, ವಿವಿಧ ರೀತಿ ಸಿಹಿ ತಿನಿಸು ಮತ್ತು ಇತರೆ ಅಟದ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಅಣ್ಣಯಪ್ಪ ಛತ್ರದಲ್ಲಿ ಅನ್ನಸಂತರ್ಪಣೆ ಆರಂಭಗೊಂಡು25 ವರ್ಷ ಪೂರೈಸಿದ ಪ್ರಯುಕ್ತ ವಿಶೇಷ ಹೋಳಿಗೆ ಭೋಜನ ಏರ್ಪಡಿಸಲಾಗಿತ್ತು. ಶ್ರೀ ಚಂದ್ರಮೌಳಿಶ್ವರ ದೇವಾಲಯದಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕವಾಗಿ ಅನ್ನಸಂತರ್ಪಣೆ ನಡೆಯುತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT