ಹಾವೇರಿ:ನಮ್ಮ ವಿದ್ಯಾರ್ಥಿಗಳಿಗೆ ಅನುಕರಣೀಯ ಆದರ್ಶಗಳಿಲ್ಲದಿರುವುದರಿಂದ ಗೊಂದಲದಲ್ಲಿದ್ದಾರೆ. ಶಿಕ್ಷಕರು ಪಾಠಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ಹಾಗೂ ಪ್ರಾಮಾಣಿಕತೆಯನ್ನು ಬಿತ್ತಬೇಕು ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.
ಸ್ಥಳೀಯ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಕದಳಿ ಮಹಿಳಾ ವೇದಿಕೆ ಜಂಟಿಯಾಗಿ ಶನಿವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಭಾಷಣ ಸ್ಪರ್ಧೆ ವಿಜೇತರ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕದಳಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ದಾಕ್ಷಾಯಣಿ ಗಾಣಿಗೇರ ಅಧ್ಯಕ್ಷತೆವಹಿಸಿ ಪ್ರೇಮಾ ಲಮಾಣಿ, ಕಲ್ಪನಾ ಪೂಜಾರ ಹಾಗೂ ಶ್ವೇತಾ ನೂಕಾಪುರ ವಿಜೇತ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ, ಪುಸ್ತಕ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕೋರಿಶೆಟ್ಟರ್, ತಮಗೆ ನೀಡಿದ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ತಾವು ಕಲಿತ ಶಾಲೆಯ ನೆನಪುಗಳನ್ನು ಮೆಲುಕು ಹಾಕಿ ಭವಿಷ್ಯದ ನಾಯಕರು ನೀವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬಸವ ಬಳಗ ಏರ್ಪಡಿಸಿದ್ದ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಳಗದ ಶಿವಬಸಪ್ಪ ಮುದ್ದಿ ವಿದ್ಯಾರ್ಥಿನಿಯರಾದ ಐಶ್ವರ್ಯಾ ಹಾವೇರಿ, ಬಿಂದು ಅರಸನಾಳ ಹಾಗೂ ಚಂದನಾ ಮೆಣಸಿನಹಳ್ಳಿ ಅವರಿಗೆ ಗೋಡೆ ಗಡಿಯಾರ ಹಾಗೂ ವಚನ ಪುಸ್ತಕ ವಿತರಿಸಿ ಮಾತನಾಡಿದರು.
ಸಿ.ಎಸ್. ಮರಳಿಹಳ್ಳಿ, ಕೆ.ಬಿ. ಭಿಕ್ಷಾವರ್ತಿಮಠ, ಮುರಿಗೆಪ್ಪ ಕಡೆಕೊಪ್ಪ, ಶೈಲಜಾ ಕೋರಿಶೆಟ್ಟರ, ಮಹೇಶ್ವರಿ, ಅಶ್ವಿನಿ, ಕಮಲಾ, ಇಂದಿರಾ ಹಾಗೂ ಚನ್ನಬಸವಣ್ಣ ರೊಡ್ಡನವರ ಇದ್ದರು.
ಪ್ರಧಾನ ಗುರುಮಾತೆ ಶೋಭಾ ಜಾಗಟಗೇರಿ ಸ್ವಾಗತಿಸಿದರು. ಲಲಿತಕ್ಕ ಹೊರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧುಮತಿ ಚಿಕ್ಕಗೌಡರ ಕಾರ್ಯಕ್ರಮ ನಿರೂಪಿಸಿದರು. ಅಮೃತಮ್ಮ ಶೀಲವಂತರ ವಂದಿಸಿದರು.