ಗುತ್ತಲ: ‘ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮನೆ ಮನೆಗೆ ಹೋಗಿ ಅಗರಬತ್ತಿ ಮಾರಾಟ ಮಾಡಿ, ಬಂದ ಲಾಭದಲ್ಲಿ ಮಗನಿಗೆ ಶಾಲೆ ಕಲಿಸಿದ್ದು ಸಾರ್ಥಕವಾಯಿತು’ ಎಂದು ಪಿಎಸ್ಐ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ 153ನೇ ರ್ಯಾಂಕ್ ಪಡೆದಿರುವ ಕುಮಾರ ಕುರಗುಂದ ಅವರ ತಾಯಿ ಗೌರಮ್ಮ ‘ಪ್ರಜಾವಾಣಿ’ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಕುಮಾರ ಅವರ ತಂದೆ ಶಿವಪ್ಪ ಪಟ್ಟಣದಲ್ಲಿ ಮನೆ ಮನೆಗೆ ಹೊಗಿ ಕಟ್ಟಿಗೆ ಒಡೆಯುವ ಕೂಲಿ ಕೆಲಸ ಮಾಡುತ್ತಾರೆ. ‘ಮಗ ಪಿಎಸ್ಐ ಆಗಿರುವುದು ಬಹಳ ಖುಷಿ ತಂದಿದೆ’ ಎಂದು ಅವರು ಹೇಳಿದರು.
ಪ್ರಾಥಮಿಕ ಶಿಕ್ಷಣವನ್ನು ಪಟ್ಟಣದಲ್ಲಿಯೇ ಮುಗಿಸಿದ ಕುಮಾರ, ಪ್ರೌಢಶಿಕ್ಷಣವನ್ನು ದೇವರಗುಡ್ಡ ಗ್ರಾಮದಲ್ಲಿ, ಪಿಯುಸಿ ಮತ್ತು ಪದವಿಯನ್ನು ಹಾವೇರಿ ಸರ್ಕಾರಿ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬೆಂಗಳೂರಿನಲ್ಲಿ ಸ್ಪರ್ಧಾ ವಿಜೇತ ಸೆಂಟರ್ನಲ್ಲಿ ಮೂರು ತಿಂಗಳು ಪಿಎಸ್ಐ ಪರೀಕ್ಷೆಗೆ ತರಬೇತಿ ಪಡೆದಿದ್ದರು.