ಹಾವೇರಿ: ಶಿವಮೊಗ್ಗ ಜಿಲ್ಲೆಯ ಸೊರಬದ ಲಕ್ಕವಳ್ಳಿ ಜೈನಮಠದ ವೃಷಭಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿಯನ್ನು ಮಹಾರಾಷ್ಟ್ರದ ನಾಂದಣಿ ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕ ಮಾಡುಬೇಕು ಎಂದು ಹಾವೇರಿ ಜಿಲ್ಲಾ ದಿಗಂಬರ ಜೈನ ಸಂಘ ಆಗ್ರಹಿಸಿದೆ.
ನಾಂದಣಿಯ ಜಿನಸೇನ ಭಟ್ಟಾರಕರು ಜಿನೈಕ್ಯರಾದ ಬಳಿಕ, ಶಾಖಾ ಮಠಾಧಿಕಾರಿಯಾದ ವೃಷಭಸೇನರನ್ನು ನೇಮಕ ಮಾಡಬೇಕು ಎಂದು ಈ ಹಿಂದೆಯೇ ನಿರ್ಧರಿಸಲಾಗಿತ್ತು. ಆದರೆ, ಈಗ ಗುಜರಾತಿನ ಸೌರಭ ಸೇನ ಭಟ್ಟಾರಕರನ್ನು ಉತ್ತರಾಧಿಕಾರಿ ಮಾಡಲು ಮುಂದಾಗುತ್ತಿದ್ದಾರೆ. ವೃಷಭಸೇನ ಭಟ್ಟಾರಕ ಪಟ್ಟಾಚಾರ್ಯರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡದೇ ಇದ್ದರೆ, ರಾಜ್ಯದ ಜೈನ ಸಮುದಾಯದವರು ಹೋರಾಟಕ್ಕೆ ಮುಂದಾಗಲಿದ್ದಾರೆ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಮಾಣಿಕಚಂದ ಎಸ್ ಲಾಡರ ಹೇಳಿದರು.
ಬಿಹಾರದಲ್ಲಿರುವ ಜೈನರ ಪವಿತ್ರ ಕೇಂದ್ರವಾದ ಶೀಖರ್ಜಿಯಲ್ಲಿ ಸರ್ಕಾರವು ಹೆಲಿಪ್ಯಾಡ್ ನಿರ್ಮಾಣ ಮಾಡಲು ಹೊರಟಿದೆ. ಅದು ತೀರ್ಥಂಕರರ ಧ್ಯಾನದ ಸ್ಥಳವಾಗಿದೆ. ಅದನ್ನು ಅಪವಿತ್ರಗೊಳಿಸಬಾರದು ಎಂದು ಅವರು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ ಸಾತನಗೊಂಡ, ಗೌರವಾಧ್ಯಕ್ಷ ರಮೇಶ ಕಳಸೂರ, ಸಂತೋಷ ಲಾಬಗೊಂಡ, ಶಶಿಧರ ವೆಂಕಪ್ಪ ಗೌಡರ, ಅಜಿತ್ ಸಿದ್ದಣ್ಣನವರ, ಅನಂತ ಹಳವಣ್ಣನವರ, ಸುರೇಶ ನಡುವಿನಮನಿ, ನಾಗರಾಜ ಕಂಚನಕೋಟಿ, ಮಹಾವೀರ ಮಾಸಣಗಿ, ಭರತೇಶ ಜಗಣ್ಣನವರ ಇದ್ದರು.