ಹಾನಗಲ್: ಗ್ರಾಮ ಪಂಚಾಯ್ತಿ ಚುನಾವಣೆಗೆ ಜನಹಿತ ರಕ್ಷಣಾ ವೇದಿಕೆಯಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತದೆ. ಸ್ಪರ್ಧೆಗೆ ಆಯ್ಕೆಗೊಂಡ ಅಭ್ಯರ್ಥಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ಎಮೋಹನಕುಮಾರ ಹೇಳಿದರು.
ತಾಲ್ಲೂಕಿನ 42 ಗ್ರಾಮ ಪಂಚಾಯ್ತಿಗಳ 600 ಸ್ಥಾನಗಳಿಗೆ ವೇದಿಕೆಯ ಬೆಂಬಲಿತ ಅಭ್ಯರ್ಥಿ ಸ್ಪರ್ಧೆಗಿಳಿಯಲಿದ್ದಾರೆ. ಗ್ರಾಮಾಭಿವೃದ್ಧಿಯ ಕನಸು ಸಾಕಾರಗೊಳ್ಳುವ ಉದ್ದೇಶದಿಂದ ಅರ್ಹ ಅಭ್ಯರ್ಥಿಯನ್ನು ವೇದಿಕೆ ಶೋಧಿಸಲಿದೆ. ಪ್ರತಿಯೊಬ್ಬ ಸ್ಪರ್ಧಿಗೂ ಪಾರದರ್ಶಕ ಆಡಳಿತ, ಗ್ರಾಮಾಭಿವೃದ್ಧಿಯ ಬದ್ಧತೆ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶೇ 33 ರಷ್ಟು ಯುವ ಪದವೀಧರ ಅಭ್ಯರ್ಥಿಗಳು, ಶೇ 33 ರಷ್ಟು ಮಹಿಳೆಯರು ಮತ್ತು ಶೇ 34 ಅನುಭವಿಗಳಿಗೆ ಅವಕಾಶ ನೀಡಲಾಗುತ್ತದೆ. ಹಲವಾರು ಜನಪರ ಕಾರ್ಯಗಳ ಮೂಲಕ ವೇದಿಕೆ ತಾಲ್ಲೂಕಿನಲ್ಲಿ ವಿಶ್ವಾಸಾರ್ಹತೆ ಪಡೆದಿದೆ. ಗ್ರಾಮ ಪಂಚಾಯ್ತಿ ಚುನಾವಣಾ ಪ್ರಯತ್ನಕ್ಕೆ ಯಶಸ್ಸು ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆಯಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವ ಉದ್ದೇಶದಿಂದ ಹೈಟೆಕ್ ಸಿದ್ಧ ಉಡುಪು ತಯಾರಿಕಾ ಘಟಕ ಆರಂಭಿಸುವ ಚಿಂತನೆ ಇದೆ, ಈ ನಿಟ್ಟಿನಲ್ಲಿ ಟೈಲರಿಂಗ್, ಎಂಬ್ರಾಯಿಡಿಂಗ್, ಹೈನುಗಾರಿಕೆ, ಕುರಿ ಸಾಕಾಣೆಯಂತಹ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ. ಸೂಕ್ತ ಪ್ರೋತ್ಸಾಹಧನ ನೀಡಲಾಗುತ್ತದೆ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೆಎಎಸ್. ಐಎಎಸ್ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತದೆ. ಜನರ ಆರೋಗ್ಯ ದೃಷ್ಟಿಯಿಂದ ತಾಲ್ಲೂಕಿನ 6 ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ 6 ಆಂಬುಲೆನ್ಸ್ ಉಚಿತ ಸೇವೆ ಒದಗಿಸಲಾಗುತ್ತದೆ ಎಂದು ಮೋಹನಕುಮಾರ ವಿವರಣೆ ನೀಡಿದರು.
ಜನಹಿತ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಕೆ.ರಾಮಣ್ಣ, ರಾಜ್ಯ ಸಂಚಾಲಕ ರಘುನಂದನ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.