ರಾಣೆಬೆನ್ನೂರು: ‘ಭಾರತೀಯರಾದ ನಾವು ಭಾವನಾ ಜೀವಿಗಳು. ಅನ್ಯ ಮಹಿಳೆಯರನ್ನು ತಾಯಿ ಹಾಗೂ ಸಹೋದರಿಯ ಸ್ಥಾನದಲ್ಲಿ ಕಂಡು ಗೌರವಿಸುತ್ತೇವೆ. ಹೀಗಾಗಿಯೇ, ವಿದೇಶಿಗರು ನಮ್ಮ ಸಂಸ್ಕೃತಿಯನ್ನು ಗೌರವಿಸುತ್ತಾರೆ’ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಇಲ್ಲಿನ ಮೃತ್ಯುಂಜಯಮಠದ ಚನ್ನೇಶ್ವರಮಠದ ವಾಗೀಶ ಪಂಡಿತಾರಾಧ್ಯ ಸಂಸ್ಕೃತಿ ಪ್ರಸಾರ ಪರಿಷತ್ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಮಾಸಿಕ ಹುಣ್ಣೆಮೆಯ ಜ್ಞಾನ ವಾಹಿನಿ 267ನೇ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
‘ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಆಧ್ಯಾತ್ಮಿಕ ಒಲವು ಹೆಚ್ಚುತ್ತದೆ. ಸರ್ವಧರ್ಮಗಳ ಬಗ್ಗೆ ಸಮಭಾವ ಮೂಡುತ್ತದೆ’ ಎಂದರು.
ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಭೌತಿಕವಾದ ನವರತ್ನಗಳಿಗಿಂತಲೂ ಮಹತ್ವವಾದವು ಜಲ, ಅನ್ನ ಮತ್ತು ಸುಭಾಷಿತ ಎಂಬ ತ್ರಿರತ್ನಗಳು. ಧಾರ್ಮಿಕ ಕಾರ್ಯಕ್ರಮಗಳಿಂದ ತ್ರಿರತ್ನಗಳ ಪ್ರಾಪ್ತಿಯ ಮಾರ್ಗ ಕಾಣಿಸುತ್ತದೆ’ ಎಂದು ಹೇಳಿದರು.
ಇಲ್ಲಿಯ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ, ರಕ್ಷಾಬಂಧನ ಮಹತ್ವದ ಕುರಿತು ಉಪನ್ಯಾಸ ನೀಡಿದರು. ವರ್ತಕರಾದ ಬಿದ್ದಾಡೆಪ್ಪ ಚಕ್ರಸಾಲಿ ಮತ್ತು ಬಸವರಾಜಪ್ಪ ಕುರುವತ್ತಿ ಕುಟುಂಬದವರು ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಳೀಯ ಕಲಾವಿದ ಗುಡ್ಡಪ್ಪ ಹಿಂದಿನ ಮನಿ ಬಳಗದಿಂದ ಸಂಗೀತ ಸೇವೆ ನಡೆಯಿತು.
ಆಡಳಿತ ಮಂಡಳಿ ಉಪಾಧ್ಯಕ್ಷ ಬಸವರಾಜಪ್ಪ ಪಟ್ಟಣಶೆಟ್ಟಿ, ಟಿ. ವೀರಣ್ಣ, ಚೆನ್ನವೀರಗೌಡ ಪಾಟೀಲ, ನಿಂಗನಗೌಡ ಪಾಟೀಲ, ವಿ.ವಿ. ಹರಪನಹಳ್ಳಿ, ಅಮೃತಗೌಡ ಡಿ. ಹಿರೇಮಠ, ವಿ.ಎಂ.ಕರ್ಜಿಗಿ, ಭಾಗ್ಯಶ್ರೀ ಗುಂಡುಗಟ್ಟಿ, ಕಸ್ತೂರಿ ಪಾಟೀಲ, ಎಂ.ಕೆ. ಹಾಲಸಿದ್ದಯ್ಯ ಶಾಸ್ತ್ರಿ ಹಾಗೂ ದಾನೇಶ್ವರಿ ಜಾಗೃತ ಅಕ್ಕನ ಬಳಗದ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.