ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಬತ್ತಿಕೊಪ್ಪ ಗ್ರಾಮದ ವೀರಗಾಸೆ ಕಲಾವಿದರಾದ ಮಹೇಶ್ವರಗೌಡ ಲಿಂಗದಹಳ್ಳಿ ಅವರು ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಹೇಶ್ವರಗೌಡ ಲಿಂಗದಹಳ್ಳಿ ಅವರು ವೀರಗಾಸೆ ಕಲೆಯಲ್ಲಿ ಅಪ್ರತಿಮ ಕಲಾವಿದರಾಗಿದ್ದು, ತಮ್ಮ ವಂಶಪಾರಂಪರ್ಯವಾಗಿ ಬಂದಿರುವ ಪುರವಂತಿಕೆ (ವೀರಗಾಸೆ) ಕಲೆಯನ್ನು 10ನೇ ವಯಸ್ಸಿನಿಂದಲೇ ರೂಢಿಸಿಕೊಂಡಿದ್ದು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ.
ಧಾರವಾಡ ಆಕಾಶವಾಣಿ, ಬೆಂಗಳೂರು ದೂರದರ್ಶನ, ಜಾನಪದ ಜಾತ್ರೆ, ಜನಪದೋತ್ಸವ, ಮೈಸೂರು ದಸರಾ, ಹಂಪಿ ಉತ್ಸವ, ಸ್ವಾತಂತ್ರ್ಯೋತ್ಸವ, ಕರ್ನಾಟಕ ರಾಜ್ಯೋತ್ಸವ, ಗಣರಾಜ್ಯೋತ್ಸವ, ಬನವಾಸಿ ಕದಂಬೋತ್ಸವ ಸೇರಿದಂತೆ ರಾಜ್ಯದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.
ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಉತ್ತರ ಕರ್ನಾಟಕ ಉತ್ಸವ, ಜೈಪುರದಲ್ಲಿ ನಡೆದ ಲೋಕರಂಗ ಉತ್ಸವ, ಕೇರಳದಲ್ಲಿ ನಡೆದ ಕಾಸರಗೂರು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧಡೆ ತಮ್ಮ ಪುರವಂತಿಕೆ ಕಲೆಯನ್ನು ಪ್ರದರ್ಶಿಸಿ ಗಮನ ಸೆಳೆದಿದ್ದು, ಇವರ ಕಲೆಯನ್ನು ಮೆಚ್ಚಿ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
‘ನನ್ನ ಜಾನಪದ ಕಲಾ ಸೇವೆ ಪರಿಗಣಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪಶಸ್ತಿಗೆ ಆಯ್ಕೆ ಮಾಡಿರುವುದು ತುಂಬ ಖುಷಿ ತಂದಿದೆ. ವಂಶಪಾರಂಪರ್ಯವಾಗಿ ಬಂದಿರುವ ಪುರವಂತಿಕೆ ಕಲೆಯನ್ನು ಮುಂದುವರಿಸಲಿದ್ದು, ಈ ಕಲೆಯನ್ನು ಉಳಿಸಿ ಬೆಳೆಸಲು ನಿರಂತರ ಶ್ರಮಿಸುವೆ’ ಎಂದು ಮಹೇಶ್ವರಗೌಡ ಲಿಂಗದಹಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ.