ಹಾವೇರಿ: ‘ಮೆಸೇಜ್ ಯುಗದಲ್ಲಿ ಪತ್ರ ಸಂಸ್ಕೃತಿಯನ್ನು ಮರೆಯಬಾರದು. ಒಂದು ಪತ್ರವು ವ್ಯಕ್ತಿಯ ಭಾವನೆ ಮತ್ತು ಸಂವೇದನೆಗಳ ಶಾಶ್ವತ ದಾಖಲೆಯಾಗಿರುತ್ತದೆ’ ಎಂದುಜ್ಞಾನಗಂಗಾ ಶಿಕ್ಷಣ ಸಮಿತಿ ಅಧ್ಯಕ್ಷ ಸಿ.ಎಂ. ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಗೆಳೆಯರ ಬಳಗದ ಆಶ್ರಯದಲ್ಲಿ ಮಾಗಾವಿ ಪ್ರೌಢಶಾಲೆಯಲ್ಲಿ ಬುಧವಾರ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮನೆಯಿಂದಲೇ ಪತ್ರ ಲೇಖನ ಬರೆದು ಕಳಿಸುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಂಪ್ಯೂಟರ್, ಲ್ಯಾಪ್ಟಾಪ್, ಮೊಬೈಲ್ಫೋನ್ಗಳಲ್ಲಿ ಟೈಪ್ ಮಾಡುವ ಈ ಕಾಲದಲ್ಲಿ ಕೈಬರಹಗಳೇ ನಾಪತ್ತೆಯಾಗುತ್ತಿವೆ. ಯಾಂತ್ರಿಕ ಬರವಣಿಗೆಗಿಂತ ಪತ್ರದಲ್ಲಿ ಲೇಖನಿ ಮೂಲಕ ಬರೆಯುವ ಬರವಣಿಗೆ ಹೆಚ್ಚು ಜೀವಂತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯಶಿಕ್ಷಕ ವಿ.ವಿ.ಉಜ್ಜಯಿನಿಮಠ ಮಾತನಾಡಿ, ‘ಮಕ್ಕಳಲ್ಲಿ ಪತ್ರ ಬರೆಯುವ ಕಲೆಯನ್ನು ಪ್ರೋತ್ಸಾಹಿಸಬೇಕು. ಇದರಿಂದ ಅಕ್ಷರ ಬರೆಯುವ ಕೌಶಲ ಮತ್ತು ಕಲ್ಪನಾ ಶಕ್ತಿ ವಿಸ್ತಾರವಾಗುತ್ತದೆ. ಶಾಲಾ ಪಠ್ಯಗಳಲ್ಲಿಯೂ ಕೂಡ ಪತ್ರ ರಚನೆಯ ಪ್ರಶ್ನೆ ಕೂಡ ಇರುವುದರಿಂದ ಇಂತಹ ಸ್ಪರ್ಧೆಗಳು ಉತ್ತೇಜನ ನೀಡುತ್ತವೆ’ ಎಂದರು.
ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳು ಪತ್ರ ವಾಚಿಸಿ ತೋರಿಸಿದರು. ಬಳಗದ ಅಧ್ಯಕ್ಷರಾದ ಸತೀಶ ಕುಲಕರ್ಣಿ, ಶಿಕ್ಷಣ ಸಮಿತಿಯ ಕೋಶಾಧ್ಯಕ್ಷ ವಿ.ಎಂ. ಪತ್ರಿ, ಪ್ರಭು ಕಲ್ಲೇದೇವರ ಇದ್ದರು. ಸ್ಪರ್ಧೆಗೆ ಒಟ್ಟು 155 ವಿದ್ಯಾರ್ಥಿಗಳು ಪತ್ರ ಲೇಖನವನ್ನು ಮನೆಯಿಂದಲೇ ಬರೆದು ಭಾಗವಹಿಸಿದ್ದರು.
ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕರಾದ ಸಿ.ಸಿ ನೀರಲಗಿ ಸ್ವಾಗತಿಸಿದರು. ಶಿಕ್ಷಕಿ ಶಾರದಾ ಅರಳೇಶ್ವರ ಕಾರ್ಯಕ್ರಮ ನಿರೂಪಣೆ ಮಾಡಿದರು. ಸೌಮ್ಯ ಬಂಡಿವಡ್ಡರ ವಂದಿಸಿದರು.