ಹಾವೇರಿ: ರಾಜ್ಯದ ಕನ್ನಡಿಗ ಮರಾಠ ಸಮುದಾಯದವರಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ‘ಮರಾಠ ಅಭಿವೃದ್ಧಿ ನಿಗಮ’ ಸ್ಥಾಪನೆ ಮಾಡಿರುವುದನ್ನು ಜಿಲ್ಲಾ ಮರಾಠ ಸಮಾಜ ಸ್ವಾಗತಿಸುತ್ತದೆ ಹಾಗೂ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದು ಮರಾಠ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್ ವೆಂಕೋಜಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾಷೆ ಮತ್ತು ಜನಾಂಗದ ಬಗ್ಗೆ ತಿಳಿಯದೇ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ನಾವು ಕನ್ನಡ ಮಾಧ್ಯಮದಲ್ಲಿ ಕಲಿತು, ಕನ್ನಡ ನಾಡು– ನುಡಿ ಹಾಗೂ ಜಲದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದೇವೆ. ಕನ್ನಡ ನಾಡು ರಕ್ಷಣೆ ಮಾಡಲು ಮುಂದಾಗಿದ್ದೇವೆ ಎಂದರು.
ಹಲವಾರು ವರ್ಷಗಳಿಂದ ಮರಾಠ ಸಮಾಜವನ್ನು ‘3ಬಿ’ ಯಿಂದ ‘2ಎ’ ವರ್ಗಕ್ಕೆ ಸೇರ್ಪಡೆ ಮಾಡಿ ಎಂದು ಹೋರಾಟ ಮಾಡುತ್ತಾ ಬಂದಿದ್ದೇವೆ. ರಾಜ್ಯ ಸರ್ಕಾರ ಈ ಬೇಡಿಕೆಯನ್ನು ಈಡೇರಿಸಬೇಕು ಎಂದು ಎಂದು ಎಂ.ಎನ್ ವೆಂಕೋಜಿ ಸರ್ಕಾರವನ್ನು ಒತ್ತಾಯಿಸಿದರು.
ಮುಖಂಡ ಸುಭಾಸ ಚವ್ಹಾಣ ಮಾತನಾಡಿ,ಕನ್ನಡ ನಾಡು ನುಡಿಗಾಗಿ ಹೋರಾಟ ಮಾಡುವರನ್ನು ಸ್ವಾಗತಿಸುತ್ತೇವೆ. ಆದರೆ, ಕನ್ನಡದ ಹೆಸರಿನಲ್ಲಿ ಲೂಟಿ ಮಾಡುತ್ತಿರುವ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಿ.ಡಿ.5ರಂದು ರಾಜ್ಯ ಬಂದ್ ಮಾಡದೇ ನಮ್ಮ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ವಿನಂತಿಸಿಕೊಂಡರು.