ಹಾವೇರಿ: ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಮೈಲಾರ ಮಹದೇವಪ್ಪ, ವೀರಯ್ಯ ಹಿರೇಮಠ ಹಾಗೂ ತಿರುಕಪ್ಪ ಮಡಿವಾಳರು ಜಿಲ್ಲೆಯ ಹೆಮ್ಮೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಲೀಲಾವತಿ ಹೇಳಿದರು.
ಇಲ್ಲಿಗೆ ಸಮೀಪದ ವೀರಸೌಧದಲ್ಲಿ ಸೋಮವಾರ ನಡೆದ ಹುತಾತ್ಮ ಮೈಲಾರ ಮಹದೇವಪ್ಪ, ವೀರಯ್ಯ ಹಿರೇಮಠ ಹಾಗೂ ತಿರುಕಪ್ಪ ಮಡಿವಾಳರ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿವರ ಅನುಯಾಯಿಗಳಾದ ಮೈಲಾರರು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಅವರ ಜೀವನ ಕುರಿತು ಇಂದಿನ ಯುವ ಸಮೂಹಕ್ಕೆ ಅರಿವು ಮೂಡಿಸುವುದು ಅವಶ್ಯಕವಾಗಿದೆ ಎಂದರು.
ಟ್ರಸ್ಟ್ ಕಾರ್ಯದರ್ಶಿ ವಿ.ಎನ್.ತಿಪ್ಪನಗೌಡರ ಮಾತನಾಡಿ, ಮೈಲಾರ, ಹಿರೇಮಠ, ಮಡಿವಾಳರ, ಸಂಗೂರ ಕರಿಯಪ್ಪ ಸ್ವಾತಂತ್ರ್ಯ ಹೋರಾಟಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅವರ ಸ್ಮರಣಾರ್ಥವಾಗಿ ರಾಜ್ಯ ಸರ್ಕಾರ ಮೈಲಾರರ ಜೀವನ ಹೋರಾಟ ಕುರಿತು ಏಳನೇ ತರಗತಿ ಪಠ್ಯದಲ್ಲಿ ಅಳವಡಿಸಲು ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರವು ಅವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ ಎಂದರು.
ಮುಖಂಡ ಸದಾನಂದಗೌಡ ಮಾತನಾಡಿ, ಸ್ವಾತಂತ್ರ ಹೋರಾಟಗಾರರಿಗೆ ತಮ್ಮ ಕುಟುಂಬಕ್ಕಿಂತ ರಾಷ್ಟ್ರ ಸೇವೆ ಮುಖ್ಯವಾಗಿತ್ತು. ಅದೇ ರೀತಿ ನಾಗರಿಕರಿಗೆ ಮತದಾನವು ಅಷ್ಟೇ ಮುಖ್ಯವಾಗಿದ್ದು, ಎಲ್ಲರೂ ಮತದಾನ ಮಾಡಬೇಕು ಎಂದರು.
ಮತದಾರರಿಗೆ ಪ್ರತಿಜ್ಞಾವಿಧಿ
ಎಲ್ಲರೂ ತಪ್ಪದೇ ಮತ ಚಲಾಯಿಸಿ, ಸುಭದ್ರ ಪ್ರಜಾಪ್ರಭುತ್ವ ಕಟ್ಟುವಲ್ಲಿ ಯಶಸ್ವಿಯಾಗಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಲೀಲಾವತಿ ಕರೆ ನೀಡಿದರು.
ಹುತಾತ್ಮರ ದಿನದ ಅಂಗವಾಗಿ ನಡೆದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾಹಿತಿಗಳಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಮತದಾನ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.
ಸಾಹಿತಿ ಸತೀಶ ಕುಲಕರ್ಣಿ, ಬಸವ ಜ್ಯೋತಿ, ಮಹಾದೇವಪ್ಪ, ಡಾ.ನರೇಂದ್ರ, ವೀರಣ್ಣ, ಚನ್ನವ್ವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ಇದ್ದರು.