ಹಾವೇರಿ:ಜಮೀರ್ ಅಹ್ಮದ್ ಖಾನ್ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಜಿಲ್ಲೆಯಲ್ಲಿ ದೇಶದ್ರೋಹಿ ಹಾಗೂ ಕೋಮು ಸಾಮರಸ್ಯ ಕದಡುವ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಸಂಸದ ಶಿವಕುಮಾರ್ ಉದಾಸಿ ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದಾಗಿ, ದೇಶದ್ರೋಹಿ ಕೃತ್ಯಗಳನ್ನು ಎಸಗಿದವರ ರಕ್ಷಣೆಗೆ ಪೊಲೀಸ್ ಹಾಗೂ ಜಿಲ್ಲಾಡಳಿತವು ನಿಲ್ಲುತ್ತಿದೆ. ಜಿಲ್ಲೆಯ ಹಾನಗಲ್, ರಾಣೆಬೆನ್ನೂರು, ಸವಣೂರು, ಶಿಗ್ಗಾವಿ, ಬಂಕಾಪುರದಲ್ಲಿ ಏನೇನು ಕೆಲಸಗಳು ನಡೆಯುತ್ತಿವೆ? ಅಲ್ಲಿಗೆ, ಯಾರು ಬಂದು ಏನು ಮಾಡುತ್ತಿದ್ದಾರೆ? ಅವರಿಗೆಲ್ಲ ಎಲ್ಲಿಂದ ಫಂಡಿಂಗ್ ಆಗುತ್ತಿದೆ? ಎಂಬುದನ್ನೂ ಶೀಘ್ರವೇ ತಿಳಿಸುತ್ತೇನೆ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಹಾನಗಲ್ ತಾಲ್ಲೂಕಿನ ಹಿರೂರಿನಲ್ಲಿ ಗಣರಾಜ್ಯೋತ್ಸವದ ಪ್ರಭಾತ್ ಪೇರಿ ನಡೆಸುತ್ತಿದ್ದ ಮಕ್ಕಳು ಹಾಗೂ ಶಿಕ್ಷಕರ ಮೇಲೆ ದೌರ್ಜನ್ಯ ಎಸಗಲಾಗಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಮಾತ್ರವಲ್ಲ, ದೇಶದ್ರೋಹದ ಕೃತ್ಯವಾಗಿದೆ. ಆದರೆ, ಆ ‘ದೇಶದ್ರೋಹಿ’ಗಳ ವಿರುದ್ಧ ಸರಳ ಕಾಯಿದೆಗಳಡಿ ದೂರು ದಾಖಲಿಸಿಕೊಂಡು, ರಾತ್ರಿಯೇ ಜಾಮೀನು ದೊರೆಯವಂತೆ ಮಾಡಿದ್ದಾರೆ ಎಂದು ಖಂಡಿಸಿದರು.
‘ಬಿಜೆಪಿಗೆ ಮತ ಹಾಕಿದವ ಮುಸಲ್ಮಾನ ಆಗಿರಲು ಸಾಧ್ಯವಿಲ್ಲ’ ಎಂದು ಸಚಿವ ಜಮೀರ್ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಹೇಳಿದ್ದರು. ಅವರ ಕೋಮು ಸಾಮರಸ್ಯ ಕದಡುವ ಹೇಳಿಕೆ ವಿರುದ್ಧ ಪೊಲೀಸರು ಯಾವುದೇ ಗುರುತರ ದೂರುಗಳನ್ನು ದಾಖಲಿಸಲಿಲ್ಲ ಎಂದು ದೂರಿದರು.
ಸಚಿವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲೇ ಅಲ್ಪಸಂಖ್ಯಾತರ ಹೆಸರು ಹೇಳಿಕೊಂಡು ಹಿಂದೂಗಳ ಮೇಲೆ ದೌರ್ಜನ್ಯ ಎಸಗಲಾ ಗುತ್ತಿದೆ ಎಂದ ಅವರು, ‘ನಮ್ಮವರೇ ಉಸ್ತುವಾರಿ ಸಚಿವರಿದ್ದಾರೆ. ನೀವು ಏನು ಹರ್ಕೊಳ್ತೀರಿ’ ಎಂದು ‘ದೇಶದ್ರೋಹಿ’ ಕೃತ್ಯ ಎಸಗಿದವರು ಸವಾಲು ಹಾಕುತ್ತಿದ್ದಾರೆ’ ಎಂದರು.
ಜಿಲ್ಲಾಡಳಿತಕ್ಕೆ ಕಾಮನ್ ಸೆನ್ಸ್ ಇಲ್ಲ. ಅದು ದೇಶದ್ರೋಹಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ ಅವರು, ಹಿರೂರಿನಲ್ಲಿ ಈ ಹಿಂದೆಯೇ ಗಣೇಶೋತ್ಸವ ಸಂದರ್ಭದಲ್ಲಿ ಗಲಭೆ ಆಗಿತ್ತು. ಆದರೂ, ಮುನ್ನೆಚ್ಚರಿಕೆ ವಹಿಸಲಿಲ್ಲ. ಇದನ್ನು ನೋಡಿದರೆ, ಗೃಹ ಸಚಿವ ಎಂ.ಬಿ. ಪಾಟೀಲರ ರಾಜೀನಾಮೆ ಕೊಡಿಸುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಎಲ್ಲೆಡೆ ದೇಶದ್ರೋಹದ ಕೃತ್ಯಗಳು ಹೆಚ್ಚುವ ಅಪಾಯವಿದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.