ಹಾವೇರಿ: ಸರ್ಕಾರದ ಆದೇಶ ಧಿಕ್ಕರಿಸಿ, ಡಿಎಪಿ ಗೊಬ್ಬರದ ಜೊತೆ ನ್ಯಾನೋ ಯೂರಿಯಾ ಲಿಂಕ್ ಮಾಡಿ ಹೆಚ್ಚಿನ ಬೆಲೆಗೆ ಮಾರುತ್ತಿರುವ ಮಾರಾಟ ಮಳಿಗೆಗಳು ಮತ್ತು ತಾಲ್ಲೂಕು ಕೃಷಿ ಸಹಕಾರ ಮಾರಾಟ ಸಂಘಗಳನ್ನು ಸೀಜ್ ಮಾಡಲು ಆದೇಶಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಜಿಲ್ಲಾ ಘಟಕದ ಅಧ್ಯಕ್ಷ ಉಜಣೆಪ್ಪ ಕೋಡಿಹಳ್ಳಿ ಒತ್ತಾಯಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕಳಪೆ ಬಿತ್ತನೆಬೀಜ ಮತ್ತು ಅಕ್ರಮ ರಸಗೊಬ್ಬರ ದಾಸ್ತಾನು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ದಾಳಿಗಳು ನೆಪ ಮಾತ್ರಕ್ಕೆ ಕಮಿಷನ್ ಹೆಚ್ಚಿಸಿಕೊಳ್ಳಲು ನಡೆಯಬಾರದು. ರೈತರ ಮೇಲಿನ ನಿಜವಾದ ಕಾಳಜಿಯಿಂದ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಗೊಬ್ಬರಕ್ಕೆ ಅನವಶ್ಯಕ ವಸ್ತುಗಳನ್ನು ಲಿಂಕ್ ಮಾಡಿ ಹೆಚ್ಚಿನ ಬೆಲೆಗೆ ಮಾರುತ್ತಿರುವುದನ್ನು ಪ್ರಶ್ನಿಸದ ಜನಪ್ರತಿನಿಧಿಗಳ ನಡವಳಿಕೆ ನೋಡಿದರೆ ಕಮಿಷನ್ ದಂಧೆ ನಡೆಯುತ್ತಿರಬಹುದು ಎಂಬ ಅನುಮಾನ ಬರುತ್ತದೆ. ಕೂಡಲೇ ಸರ್ಕಾರ ಲಿಂಕಿಂಗ್ ವಿಷಯವಾಗಿ ಸ್ಪಷ್ಟ ಆದೇಶ ಹೊರಡಿಸಬೇಕು. ಮಾರಾಟಗಾರರು ಮತ್ತು ರೈತರ ಮಧ್ಯೆ ಘರ್ಷಣೆಯಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಬ್ಸಿಡಿಯಲ್ಲಿ ಸಿಗುತ್ತಿರುವ ಕೃಷಿ ಉಪಕರಣಗಳು ಕಳಪೆ ಮಟ್ಟದಿಂದ ಕೂಡಿವೆ. ಕೃಷಿ ಸಚಿವರು ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ, ಬಸವರಾಜ ಗೋಣೆಪ್ಪನವರ, ಸೋಮನಗೌಡ ಗುಬ್ಬಿಹಾಳ, ಚರಣರಾಜ್ ರೊಡ್ಡನವರ ಇದ್ದರು.