ಬ್ಯಾಡಗಿ: ಪಟ್ಟಣದಲ್ಲಿ ಬಡ ಕೂಲಿ ಕಾರ್ಮಿಕರಿಗೆ ನಿವೇಶನ ಒದಗಿಸಬೇಕು ಹಾಗೂ ಕುಡಿಯುವ ನೀರಿನ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವಂತೆ ಒತ್ತಾಯಿಸಿ ಶುಕ್ರವಾರ ಭ್ರಷ್ಟಾಚಾರ ವಿರೋಧಿ ಜನ ಅಂದೋಲನ ರಾಜ್ಯದ ಘಟಕ ಹಾಗೂ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಸದಸ್ಯರು ಶುಕ್ರವಾರ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳಿಯಪ್ಪಗೋಳ ಅವರಿಗೆ ಮನವಿ ಸಲ್ಲಿಸಿದರು.
ವೇಳೆ ನ್ಯಾಸ್ ಸಮಿತಿಯ ರಾಜ್ಯ ಸಂಚಾಲಕ ಎಂ.ಡಿ.ಚಿಕ್ಕಣ್ಣನವರ ಮಾತನಾಡಿ, ಪಟ್ಟಣದ ಮಲ್ಲೂರು ರಸ್ತೆಯಲ್ಲಿ ಪುರಸಭೆ ವತಿಯಿಂದ 10 ಎಕರೆ ಜಮೀನು ಖರೀದಿಸಿದ್ದು, ಅದರಲ್ಲಿ ಜಿ–ಪ್ಲಸ್ ಮಾದರಿಯಲ್ಲಿ ಮನೆ ನಿರ್ಮಾಣಕ್ಕೆ ತಲಾ ₨30ಸಾವಿರ ವಂತಿಕೆಯನ್ನು ತುಂಬಿಸಿಕೊಂಡು ಒಂದೂವರೆ ವರ್ಷಗಳಾಗಿವೆ. ಇದುವರೆವಿಗೂ ನಿವೇಶನ ಹಂಚಿಕೆ ಮಾಡಿಲ್ಲ. ವಂತಿಕೆಯ ಹಣ ಸಂದಾಯ ಮಾಡಿದ ಪ್ರತಿಯೊಬ್ಬ ನಿರ್ಗತಿಕರಿಗೆ ಬೇರೆಡೆ ನಿವೇಶನ ನೀಡಬೇಕು ಇಲ್ಲದಿದ್ದರೆ ಅನಿರ್ಧಿಷ್ಠ ಅವಧಿಯವರೆಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ಪುರಸಭೆ ಮಾಜಿ ಸದಸ್ಯ ದುರ್ಗೇಶ ಗೋಣೆಮ್ಮನವರ ಮಾತನಾಡಿ, ಪಟ್ಟಣದ ನಾಗರಿಕರಿಗೆ ಕುಡಿಯುವ ನೀರು ಪೂರೈಕೆ ಮಾಡುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿ ಎರಡ್ಮೂರು ವರ್ಷಗಳಾಗಿವೆ. ಟ್ಯಾಂಕ್ಗಳನ್ನು ಪರಿಶೀಲಿಸಲಾಗಿ ಮಣ್ಣು, ಜೊಂಡು ಸಂಗ್ರವಾಗಿರುವುದು ಕಂಡು ಬಂದಿದೆ. ಇದರಿಂದ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾವುವ ಸಂಭವ ಹೆಚ್ಚಿದೆ. ಕಾರಣ ಟ್ಯಾಂಕ್ಗಳ ಸ್ವಚ್ಛತೆಗೆ ಕ್ರಮ ಕೈಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಈ ವೇಳೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ಎಸ್.ಎಸ್.ಬಿದರಿ, ಸದಸ್ಯರಾದ ಸಿ.ಶಿವಾನಂದಪ್ಪ, ಜಿ.ಎಸ್.ಶಿರಗಂಬಿ, ಎಂ.ಕೆ.ಹೊಸಮನಿ, ಎಸ್.ಎಲ್.ತೆಂಬದ, ಕೆ.ಎನ್.ಹುಚ್ಚೇರ, ಕೋರಿಶೆಟ್ಟರ ಬಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.