ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠೇವಣಿ ಹಣ ಪಾವತಿಸಲು ಜಿಲ್ಲಾ ಗ್ರಾಹಕರ ಆಯೋಗ ಆದೇಶ

Last Updated 18 ಆಗಸ್ಟ್ 2021, 13:46 IST
ಅಕ್ಷರ ಗಾತ್ರ

ಹಾವೇರಿ: 30 ದಿನದೊಳಗಾಗಿ ಠೇವಣಿ ಹಣವನ್ನು ಗ್ರಾಹಕರಿಗೆ ಪಾವತಿಸುವಂತೆ ಸುವರ್ಣ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಕರ್ನಾಟಕ ಬ್ಯಾಂಕ್ ಉದ್ಯೋಗಿ ಶಿರಸಿಯ ಗುರುರಾಜ ಅಣ್ಣಯ್ಯ ಶೇಠ ಎಂಬುವರು ಸುವರ್ಣ ಪತ್ತಿನ ಸೌಹಾರ್ದ ಸಹಕಾರಿ ಸವಣೂರ ಶಾಖೆಯ ವ್ಯವಸ್ಥಾಪಕ ಕಿರಣ ಜನಾರ್ಧನ ಶೇಠ್‌ ಅವರ ಪ್ರೇರಣೆಯಿಂದ ಕುಟುಂಬದ ಸದಸ್ಯರ ಹೆಸರಿನಲ್ಲಿ ₹16,41,563 ಮೊತ್ತದ 14 ನಿಶ್ಚಿತ ಠೇವಣಿಗಳನ್ನು ಮಾಡಿದ್ದರು.

ಈ ಪೈಕಿ ಅವಧಿ ಮುಗಿದ ಠೇವಣಿಗಳ ಹಣ ಹಿಂಪಡೆಯಲು ಬ್ಯಾಂಕಿಗೆ ಅರ್ಜಿ ಸಲ್ಲಿಸಿದಾಗ ಈ ಠೇವಣಿ ಆಧಾರದ ಮೇಲೆ ಸುವರ್ಣ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ₹4.50 ಲಕ್ಷ ಬ್ಯಾಂಕ್ ಸಾಲ ಪಡೆದಿರುವುದಾಗಿ ಠೇವಣಿದಾರರಾದ ಗುರುರಾಜ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು.

ನೈಜವಾಗಿ ಠೇವಣಿದಾರರಾದ ಗುರುರಾಜ ಅವರು ಸುವರ್ಣ ಸಹಕಾರಿ ಬ್ಯಾಂಕಿನಿಂದ ಯಾವುದೇ ಸಾಲ ಪಡೆಯದ ಕಾರಣ ಈ ಕುರಿತಂತೆ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆಯನ್ನು ಕೂಲಕುಂಷವಾಗಿ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಸುನಂದಾ ಹಾಗೂ ಸದಸ್ಯರಾದ ಮಹೇಶ್ವರಿ ಬಿ.ಎಸ್. ಅವರು ಸುವರ್ಣ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಯ ಸವಣೂರ ಹಾಗೂ ಹಾವೇರಿ ಶಾಖಾ ವ್ಯವಸ್ಥಾಪಕರು ಅಥವಾ ಸಂಸ್ಥೆಯ ಅಧ್ಯಕ್ಷರು ಒಂಟಿಯಾಗಿ ಮತ್ತು ಜಂಟಿಯಾಗಿ ₹16,41,563 ನಿಶ್ಚಿತ ಠೇವಣಿಗಳ ಮೊತ್ತವನ್ನು ಶೇ 6ರ ಬಡ್ಡಿಯನ್ನು ಸೇರಿಸಿ ನೀಡಲು ಹಾಗೂ ಮಾನಸಿಕ ವ್ಯಥೆಗೆ ಮತ್ತು ಪ್ರಕರಣದ ಪರಿಹಾರವಾಗಿ ₹10 ಸಾವಿರ ಪಾವತಿಸಲು ಆದೇಶ ಹೊರಡಿಸಿದ್ದಾರೆ.

ಆದೇಶವಾದ 30 ದಿನಗಳಲ್ಲಿ ಮೊತ್ತ ಪಾವತಿಸಲು ವಿಫಲವಾದರೆ ವಾರ್ಷಿಕ ಶೇ 12ರ ಬಡ್ಡಿ ಸಮೇತ ಪಾವತಿಸಬೇಕು ಎಂದು ಆದೇಶಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ನೋಂದಣಾಧಿಕಾರಿ ಹಾಗೂ ಸಹಾಯಕ ಆಡಳಿತಾಧಿಕಾರಿ ಕರಿಯಪ್ಪ ಬಡಪ್ಪಳವರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT