ಹಾವೇರಿ: ಜಿಲ್ಲೆಯಾದ್ಯಂತ ಬುಧವಾರ ಸುರಿದ ನಿರಂತರ ಮಳೆಯಿಂದಹಾನಗಲ್ ತಾಲ್ಲೂಕಿನ ಕೂಡಲ ಗ್ರಾಮದ ಸಮೀಪ ವರದಾ ನದಿ ತುಂಬಿ ಹರಿಯುತ್ತಿದ್ದು, ಸೇತುವೆ ಮುಳುಗಿದೆ. ಇದರಿಂದ ಕೂಡಲ ಮತ್ತು ನಾಗನೂರ ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಹಾನಗಲ್ ತಾಲ್ಲೂಕಿನ ನರೇಗಲ್, ಮಾರನಬೀಡ, ಬೊಮ್ಮನಹಳ್ಳಿ, ಕಾಡಶೆಟ್ಟಿಹಳ್ಳಿ, ಹರವಿ ಮುಂತಾದ ಗ್ರಾಮಗಳ ಜನರು ಕೂಡಲ ಗ್ರಾಮದ ಮುಖಾಂತರವೇ ಹಾವೇರಿಗೆ ಸಂಚರಿಸುತ್ತಿದ್ದರು. ಈಗ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ 20 ಕಿ.ಮೀ. ಬಳಸಿಕೊಂಡು ಸಂಗೂರ ಗ್ರಾಮದ ಮೂಲಕ ಹಾವೇರಿ ತಲುಪುವಂತಾಗಿದೆ.
‘ಕಳೆದ ವರ್ಷ ವರದಾ ನದಿ ಅಪಾಯ ಮಟ್ಟ ಮೀರಿ ಹರಿದು ಅಕ್ಕಪಕ್ಕದ ನೂರಾರು ಎಕರೆ ಕೃಷಿಭೂಮಿ ಜಲಾವೃತವಾಗಿ ಬೆಳೆ ನಷ್ಟವಾಗಿತ್ತು. ದಂಡೆಯ ಅಕ್ಕಪಕ್ಕದ ಮನೆಗಳು ಶಿಥಿಲಗೊಂಡಿದ್ದವು. ಈಗ ನಿರಂತರ ಮಳೆ ಸುರಿಯುತ್ತಿರುವುದರಿಂದ ಮತ್ತೆ ಪ್ರವಾಹ ಉಂಟಾಗಬಹುದು ಎಂಬ ಭೀತಿ ಕಾಡುತ್ತಿದೆ’ ಎನ್ನುತ್ತಾರೆ ನಾಗನೂರ ಗ್ರಾಮದ ನಿವಾಸಿ ನೀಲಪ್ಪ ಅವ್ವಕ್ಕನವರ.
ಈ ಬಾರಿಯೂ ಉತ್ತಮ ಮಳೆಯಾಗುತ್ತಿರುವುದರಿಂದ ನಾಗನೂರು, ದೇವಗಿರಿ ಗ್ರಾಮಗಳ ಜಮೀನುಗಳಲ್ಲಿ ನೀರು ನಿಂತಿದೆ. ಬೆಳೆ ಕೊಳೆತು ಹೋಗಬಾರದು ಎಂಬ ಉದ್ದೇಶದಿಂದ ನೀರನ್ನು ಹೊರಹಾಕಲು ರೈತರು ಹರಸಾಹಸ ಪಡುತ್ತಿರುವ ದೃಶ್ಯ ಕಂಡು ಬಂದಿತು.