ಹಾವೇರಿ: ಕುಣಿಮೆಳ್ಳಿಹಳ್ಳಿ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿದ್ದ ಪರಿಹಾರ ಕೇಂದ್ರದಿಂದ ಮಕ್ಕಳ ಕಲಿಕೆಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತವು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸಂತ್ರಸ್ತರನ್ನು ಶಾಲಾ ಕಟ್ಟಡದಿಂದ ಸ್ಥಳಾಂತರ ಮಾಡಿದೆ. ಬುಧವಾರ ತರಗತಿಗಳು ನಡೆದವು.
ಪರಿಹಾರ ಕೇಂದ್ರದಲ್ಲಿ 15 ಕುಟುಂಬಗಳು ವಾಸವಿದ್ದವು. ಮಂಗಳವಾರ ಬೆಳಿಗ್ಗೆ ಕೇಂದ್ರದ ಬಳಿ ಬಂದು ಗಲಾಟೆ ಮಾಡಿದ್ದ ಗ್ರಾಮಸ್ಥರ ಗುಂಪು, ಮಕ್ಕಳ ಕಲಿಕೆ ದೃಷ್ಟಿಯಿಂದ ಸಂತ್ರಸ್ತರನ್ನು 24 ತಾಸಿನೊಳಗೆ ಸ್ಥಳಾಂತರಿಸಬೇಕು ಎಂದು ಗಡುವು ನೀಡಿತ್ತು. ಈ ಕುರಿತು ‘ಪರಿಹಾರ ಕೇಂದ್ರ ಬಿಡಲು ಡೆಡ್ಲೈನ್’ ಶೀರ್ಷಿಕೆಯಡಿ‘ಪ್ರಜಾವಾಣಿ’ಯಲ್ಲಿ ಬುಧವಾರ ಸುದ್ದಿ ಪ್ರಕಟವಾಗಿತ್ತು.
ವರದಿ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿಯವರು, ಉಪ ವಿಭಾಗಾಧಿಕಾರಿ ಹಾಗೂ ಸವಣೂರು ತಹಶೀಲ್ದಾರ್ ಅವರನ್ನು ಗ್ರಾಮಕ್ಕೆ ಕಳುಹಿಸಿ ಮಾಹಿತಿ ಪಡೆದುಕೊಂಡರು. ಅಲ್ಲದೇ, ಸಂತ್ರಸ್ತರಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸುವಂತೆಯೂ ಸೂಚಿಸಿದರು.