ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಇಲ್ಲದ ₹6.96 ಲಕ್ಷ ನಗದು ವಶ

ನಾಲ್ಕು ವಿಧಾನಸಭಾ ಮತಕ್ಷೇತ್ರಗಳಲ್ಲಿ ಚುನಾವಣೆಗೆ ಸಕಲ ಸಿದ್ಧತೆ: ಜೆ.ಮಂಜುನಾಥ್
Last Updated 17 ಏಪ್ರಿಲ್ 2018, 11:32 IST
ಅಕ್ಷರ ಗಾತ್ರ

ಯಾದಗಿರಿ: ‘ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಜಿಲ್ಲೆಯಲ್ಲಿ ಇದುವರೆಗೆ ದಾಖಲೆ ಇಲ್ಲದ ₹ 6,96,020 ನಗದು ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿ ಜೆ.ಮಂಜುನಾಥ್ ತಿಳಿಸಿದರು.

‘ಅಬಕಾರಿ ಪೊಲೀಸರು ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿ ₹2,84,348 ಮೌಲ್ಯದ 782 ಲೀಟರ್ ಅಕ್ರಮ ಮದ್ಯ ಮತ್ತು ₹9,59,433 ಮೌಲ್ಯದ 12 ದ್ವಿಚಕ್ರ ವಾಹನ, ಎರಡು ನಾಲ್ಕು ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 52 ಪ್ರಕರಣ ದಾಖಲಿಸಿಕೊಂಡಿದ್ದು, 22 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ವೀಕ್ಷಣಾ ತಂಡ ಭೇಟಿ: ‘ಜಿಲ್ಲೆಯ ನಾಲ್ಕು ವಿಧಾನಸಭಾ ಮತಕ್ಷೇತ್ರಗಳಿಗೆ ಸಾಮಾನ್ಯ ಹಾಗೂ ಪೊಲೀಸ್ ವೀಕ್ಷಣಾ ತಂಡಗಳ ಅಧಿಕಾರಿಗಳು ಏ. 24ರಂದು ಭೇಟಿ ನೀಡಲಿದ್ದಾರೆ. ಖರ್ಚು-ವೆಚ್ಚ ತಂಡದ ಅಧಿಕಾರಿಗಳು ಏ.17ರಂದು ಜಿಲ್ಲೆಯಲ್ಲಿ ಸಂಚಾರ ಮಾಡುವರು. ಸುರಪುರ ಮತ್ತು ಶಹಾಪುರ ಕ್ಷೇತ್ರಗಳಿಗೆ ಅಬು ಇಮ್ರಾನ್, ಯಾದಗಿರಿ ಕ್ಷೇತ್ರದಲ್ಲಿ ಡಾ.ಶಕಿಲ್ ಪಿ.ಅಹ್ಮದ್, ಗುರುಮಠಕಲ್ ಕ್ಷೇತ್ರದಲ್ಲಿ ಕೆ.ಶಾರದಾ ದೇವಿ ಸಾಮಾನ್ಯ ವೀಕ್ಷಕರಾಗಿದ್ದಾರೆ. ಸುರಪುರ ಮತ್ತು ಶಹಾಪುರ ಕ್ಷೇತ್ರಗಳಲ್ಲಿ ಪಂಕಜ್‌ಕುಮಾರ್ ಹಾಗೂ ಯಾದಗಿರಿ ಮತ್ತು ಗುರುಮಠಕಲ್‌ನಲ್ಲಿ ಸುರೇಂದ್ರ ಮೋಹನ್ ಪಕ್ಷಗಳ ಖರ್ಚು-ವೆಚ್ಚದ ನಿಗಾವಹಿಸುವರು. ಈ ನಾಲ್ಕೂ ವಿಧಾನಸಭಾ ಕ್ಷೇತ್ರಗಳಿಗೆ ಎಚ್.ಹಿಮೇಂದ್ರನಾಥ್ ಪೊಲೀಸ್ ವೀಕ್ಷಕರಾಗಿ ಕಾರ್ಯ ನಿರ್ವಹಿಸುವರು. ಜಿಲ್ಲೆಯಲ್ಲಿ ಈಗಾಗಲೇ ಎಂಸಿಸಿ ನಾಲ್ಕು ತಂಡ, ಎಫ್‌ಎಸ್‌ಟಿ 32ತಂಡ, ಎಸ್‌ಎಸ್‌ಟಿ 21, ವಿಎಸ್‌ಟಿ 20, ವಿವಿಟಿ4, ಎಸ್‌ಒ 75, ಎಟಿ4 ಹಾಗೂ ಎಇಒ 4 ತಂಡಗಳು ಕಾರ್ಯ ನಿರ್ವಹಿಸುತ್ತಿವೆ’ ಎಂದು ತಿಳಿಸಿದರು.

‘34,373 ಅರ್ಜಿ ಸ್ವೀಕಾರ: ಜಿಲ್ಲೆಯಲ್ಲಿ ಸೇರ್ಪಡೆ, ಹೆಸರು ತೆಗೆದು ಹಾಕುವುದು, ತಿದ್ದುಪಡಿ, ಕ್ಷೇತ್ರ ಬದಲಾವಣೆ ಕೋರಿ ಒಟ್ಟು 34,373 ಅರ್ಜಿಗಳು ಬಂದಿವೆ.. ಅವುಗಳಲ್ಲಿ 23,001 ಹೊಸ ಸೇರ್ಪಡೆ, 9,446 ಹೆಸರು ತೆಗೆದು ಹಾಕಲು, 4,443 ತಿದ್ದುಪಡಿ, 1,483 ಕ್ಷೇತ್ರ ಬದಲಾವಣೆ ಅರ್ಜಿಗಳು ಸೇರಿವೆ. ಏ.24ರಂದು ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ಈ ಪಟ್ಟಿಗೆ ಆಕ್ಷೇಪಣೆ ಮತ್ತು ಸಲಹೆಗೆ 7 ದಿನ ಕಾಲಾವಕಾಶ ನೀಡಲಾಗುವುದು. ಏ. 14ರ ನಂತರ ಬಂದ ಅರ್ಜಿಗಳು ಈ ಚುನಾವಣೆಗೆ ಪರಿಗಣಿಸುವುದಿಲ್ಲ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯ 1,129 ಮತಗಟ್ಟೆಗಳಿಗೆ ಬೇಕಾದ 6,775 ಅಧಿಕಾರಿ (ಶೇ 120)ಗಳನ್ನು ಈಗಾಗಲೇ ನೇಮಕ ಮಾಡಲಾಗಿದ್ದು, ಅವರಿಗೆ ತರಬೇತಿ ನೀಡಲಾಗುತ್ತಿದೆ. 1,355 ತಂಡಗಳನ್ನು ರಚನೆ ಮಾಡಿ, ಇವರಲ್ಲಿ ಮತಗಟ್ಟೆ ಚುನಾವಣಾ ಅಧಿಕಾರಿ (ಪಿಆರ್‌ಒ) ಮತ್ತು ಸಹಾಯಕ ಮತಗಟ್ಟೆ ಚುನಾವಣಾ ಅಧಿಕಾರಿ (ಎಪಿಆರ್‌ಒ)ಗಳನ್ನು ಗುರುತಿಸಲಾಗುವುದು’ ಎಂದರು.

‘ಜಿಲ್ಲೆಯಲ್ಲಿ ಸ್ಥಾಪಿಸಿರುವ 1,129 ಮತದಾನ ಕೇಂದ್ರಗಳಲ್ಲಿ 226 ಕೇಂದ್ರಗಳನ್ನು ಸಮಸ್ಯಾತ್ಮಕ ಕೇಂದ್ರಗಳೆಂದು ಗುರುತಿಸಲಾಗಿದೆ. ಮಹಿಳಾ ಮತದಾರರು ಹೆಚ್ಚಿರುವ ವಿಧಾನಸಭಾ ಮತಕ್ಷೇತ್ರಗಳಲ್ಲಿ ತಲಾ ಎರಡರಂತೆ 8 ಮತಗಟ್ಟೆಗಳಿಗೆ ಗುಲಾಬಿ (ಪಿಂಕ್) ಮತದಾನ ಕೇಂದ್ರಗಳೆಂದು ಗುರುತಿಸಲಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಪಿಆರ್‌ಒ ಮತ್ತು ಎಪಿಆರ್‌ಒ ಅವರೂ ಕೂಡ ಮಹಿಳೆಯರೇ ಇರುತ್ತಾರೆ. ಸುರಪುರದಲ್ಲಿ 10, ಶಹಾಪುರದಲ್ಲಿ 9, ಯಾದಗಿರಿಯಲ್ಲಿ 10, ಗುರುಮಠಕಲ್‌ನಲ್ಲಿ 10 ಕೇಂದ್ರಗಳನ್ನು ವೆಬ್‌ಕಾಸ್ಟಿಂಗ್ ಮತದಾನ ಕೇಂದ್ರಗಳೆಂದು ಗುರುತಿಸಲಾಗಿದೆ. ಅವುಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಯನ್ನು ಅಂತರ್ಜಾಲದಲ್ಲಿ ವೀಕ್ಷಣೆ ಮಾಡಬಹುದು. ಅಲ್ಲದೇ, 40 ಮಾದರಿ ಮತದಾನ ಕೇಂದ್ರಗಳೆಂದು ಗುರುತಿಸಲಾಗಿದೆ’ ಎಂದರು.

ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರಗಳು:  ‘ಸುರಪುರ ಕ್ಷೇತ್ರ- ಪ್ರಭು ಕಾಲೇಜು ಸುರಪುರ, ಶಹಾಪುರ- ಸರ್ಕಾರಿ ಪದವಿ ಕಾಲೇಜು ಶಹಾಪುರ, ಯಾದಗಿರಿ- ಸರ್ಕಾರಿ ಜೂನಿಯರ್ ಕಾಲೇಜು ಯಾದಗಿರಿ, ಗುರುಮಠಕಲ್- ಚಿರಂಜೀವಿ ಪ್ರೌಢಶಾಲೆ ಯಾದಗಿರಿ ಇವು ಮತದಾನ ಕೇಂದ್ರಗಳಿಗೆ ಚುನಾವಣಾ ಸಾಧನಗಳನ್ನು ನೀಡುವ ಮತ್ತು ಮತದಾನ ಬಳಿಕ ಅವುಗಳನ್ನು ಮರಳಿ ಪಡೆಯುವ ಕೇಂದ್ರಗಳಾಗಿವೆ. ಬಳಿಕ ಈ ಎಲ್ಲಾ ಕ್ಷೇತ್ರಗಳ ಮತ ಎಣಿಕೆ ಯಾದಗಿರಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಯಲಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಯಾದಗಿರಿಯ ಅಬಕಾರಿ ಉಪ ಆಯುಕ್ತ ಜಿ.ಪಿ.ನರೇಂದ್ರಕುಮಾರ ಇದ್ದರು.

ಇಂದಿನಿಂದ ನಾಮಪತ್ರ ಸ್ವೀಕಾರ

ಜಿಲ್ಲೆಯ ಆಯಾ ತಾಲ್ಲೂಕಿನ ತಹಶೀಲ್ದಾರ್ ಕಚೇರಿ ಮತ್ತು ಗುರುಮಠಕಲ್‌ನ ಪುರಸಭೆ ಕಚೇರಿಗಳಲ್ಲಿ ಏ.17ರಿಂದ ಅಭ್ಯರ್ಥಿಗಳ ನಾಮಪತ್ರ ಸ್ವೀಕರಿಸಲಾಗುವುದು. ರಜಾ ದಿನ ಹೊರತುಪಡಿಸಿ ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿಧಾನಸಭಾ ಚುನಾವಣಾಧಿಕಾರಿಗಳು ನಾಮಪತ್ರ ಸ್ವೀಕರಿಸುವರು. ಅಭ್ಯರ್ಥಿ ಜತೆಗೆ 4 ಜನ ಬರಬಹುದು. 100 ಮೀಟರ್ ವ್ಯಾಪ್ತಿಯಲ್ಲಿ ಘೋಷಣೆ ಕೂಗುವಂತಿಲ್ಲ. ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಪಕ್ಷಗಳ ಕಾರ್ಯಕರ್ತರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಒಟ್ಟಾರೆ ನಾಲ್ಕು ವಿಧಾನಸಭಾ ಮತಕ್ಷೇತ್ರಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥಿತ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮತದಾನ ಕೇಂದ್ರಗಳಿಗೆ ಮತಗಟ್ಟೆ ಸಂಖ್ಯೆ ಹಾಕಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.

15 ರೌಡಿಗಳ ಗಡಿಪಾರಿಗೆ ಶಿಫಾರಸು

15 ಜನ ರೌಡಿಗಳನ್ನು ಗಡಿಪಾರು ಮಾಡಲು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದರು. ಬ್ಯಾಂಕ್ ಮತ್ತು ಇನ್ನಿತರ ಸ್ಥಳಗಳಲ್ಲಿ ಭದ್ರತೆಗಾಗಿ ಬಳಸುತ್ತಿರುವ 26 ಆಯುಧಗಳನ್ನು ಬಿಟ್ಟು ಜಿಲ್ಲೆಯಲ್ಲಿರುವ ಆಯುಧಗಳನ್ನು ಪೊಲೀಸ್ ಇಲಾಖೆ ವಶಕ್ಕೆ ಪಡೆದಿದೆ. 160ಕ್ಕಿಂತ ಹೆಚ್ಚು ಜನರಿರುವ ಕೇಂದ್ರ ಭದ್ರತಾ ಪಡೆಗಳ ಎರಡು ತಂಡಗಳು ಜಿಲ್ಲೆಗೆ ಬಂದಿದ್ದು, ಯಾದಗಿರಿ ಮತ್ತು ಶಹಾಪುರ ಚೆಕ್ ಪೋಸ್ಟ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.

**

ಚುನಾವಣೆಗೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಸಿಬ್ಬಂದಿಗೆ ಸಾರ್ವಜಕನಿಕರು ಸಹಕರಿಸಿದರೆ ಚುನಾವಣೆ ಯಶಸ್ವಿಯಾಗುತ್ತದೆ – ಜೆ.ಮಂಜುನಾಥ್, ಜಿಲ್ಲಾ ಚುನಾವಣಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT