ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಶ್ರದ್ಧಾಕೇಂದ್ರ ಬಾಳೂರು

ಸಾಮಾಜಿಕ, ಶೈಕ್ಷಣಿಕ ಸೇವೆಗೆ ಹೆಸರಾದ ಅಡವಿಸ್ವಾಮಿ ಮಠ: ತಪಸ್ವಿಗಳ ಗದ್ದುಗೆ ನಿರ್ಮಾಣ
Last Updated 11 ಜೂನ್ 2022, 12:57 IST
ಅಕ್ಷರ ಗಾತ್ರ

ಅಕ್ಕಿಆಲೂರ: ನಾಡಿಗೆ ಮಠಗಳ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆ ಅಪಾರವಾದುದು. ಇಂಥ ವಿಶಿಷ್ಟ ಹಿನ್ನೆಲೆಯ ಮಠಗಳ ಮಾಲಿಕೆಯಲ್ಲಿ ಹಾನಗಲ್ ತಾಲ್ಲೂಕಿನ ಬಾಳೂರು ಗ್ರಾಮದ ಅಡವಿಸ್ವಾಮಿ ಮಠ ಪ್ರಮುಖವಾದುದು.

ಬಾಳೂರಿನ ಅಡವಿಸ್ವಾಮಿ ಮಠ ವಂಶ ಪಾರಂಪರೆ ಮಾಲಿಕೆಗೆ ಸೇರಿದ ಶ್ರೀಮಠವೆನಿಸಿದರೂ ಹಾನಗಲ್ ಲಿಂ.ಕುಮಾರ ಶಿವಯೋಗಿಗಳ ಸಮಾಜ ಸೇವಾ ಕನಸು ಹೊತ್ತು ನಡೆದ ಜಾಗೃತ ಧಾರ್ಮಿಕ ಶ್ರದ್ಧಾ ಕೇಂದ್ರ ಎಂಬ ಹಿರಿಮೆಗೆ ಪಾತ್ರವಾಗಿದೆ.

ಶ್ರೀಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ಅಡವಿಸ್ವಾಮೀಜಿ ಅವರು ಜೀರ್ಣಾವಸ್ಥೆಯಿಂದ ಕಾಲಗರ್ಭ ಸೇರುತ್ತಿದ್ದ ಶ್ರೀಮಠವನ್ನು ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರಗೊಳಿಸಿದ್ದರು. ಹಾನಗಲ್ ಕುಮಾರಸ್ವಾಮಿಗಳ ನಾಮವನ್ನು ಮಂತ್ರವಾಗಿಸಿಕೊಂಡಿದ್ದ ಅಡವಿ ಸ್ವಾಮೀಜಿ ಅನುದಿನವೂ ಶಿವಯೋಗ ಮತ್ತು ಗುರುಧ್ಯಾನದಲ್ಲಿ ಏಕಾಂತವಾದವರು. ತಮ್ಮ ಶಿವಯೋಗ ದೀಪ್ತಿಯನ್ನು ಲೋಕಕ್ಕೆ ನೀಡಿದವರು.

ಬಾಳೂರು ಮಾತ್ರವಲ್ಲದೇ ಸುತ್ತಲಿನ ಅಕ್ಕಿಆಲೂರ, ಡೊಳ್ಳೇಶ್ವರ, ಗುರುರಾಯಪಟ್ಟಣ, ಸವಣೂರು, ಜಂಬಿ, ಗೆಜ್ಜಿಹಳ್ಳಿ, ದ್ಯಾಮನಕೊಪ್ಪ, ಹೀರೂರು, ಹಿರೇಕಣಗಿ, ಗಡಿಯಂಕನಹಳ್ಳಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ಸಂಚರಿಸಿ ಅನುಷ್ಠಾನ, ಜಪ-ತಪವನಾಚರಿಸಿದವರು.

ಅಡವಿಸ್ವಾಮಿ ಮಠದ ಪರಂಪರೆ ಬಹು ಪುರಾತನವಾದುದು. ಬಾಳೂರಿನ ಅಡವಿಸ್ವಾಮಿ ಮಠ ಹಾಗೂ ಅಕ್ಕಿಆಲೂರಿನ ವಿರಕ್ತಮಠದ ಸಂಬಂಧ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಇವೆರಡು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಈ ಭಾಗದ ಭಕ್ತರ ಪಾಲಿಗೆ ಎರಡು ಕಣ್ಣುಗಳಿದ್ದಂತೆ.

ಬಾಳೂರಿನ ಮಠದಲ್ಲಿ ಈವರೆಗೆ 10 ಸ್ವಾಮಿಗಳು ತಪಸ್ವಿಗಳಾಗಿ, ತಮ್ಮ ಪೂಜಾ ವೈಭವದಿಂದ ಪ್ರಸಿದ್ಧರಾಗಿದ್ದಾರೆ. ಬಾಳೂರಿನ ಮಠದಲ್ಲಿ ಮೂವರು ಸ್ವಾಮಿಗಳ ಗದ್ದುಗೆಗಳಿದ್ದು ಸವಣೂರಿನಲ್ಲಿ 3 ಹಾಗೂ ಜಂಬಿಯಲ್ಲಿ ಓರ್ವ ಸ್ವಾಮಿಗಳ ಗದ್ದುಗೆ ಕಾಣಬಹುದಾಗಿದೆ.

ಪೂಜ್ಯರ ನೇತೃತ್ವದಲ್ಲಿ ಪವಿತ್ರ ಪರಂಪರೆಯ ರಕ್ಷಣೆಯ ಜೊತೆಗೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳು ಇಲ್ಲಿ ನಿರಂತರವಾಗಿ ನಡೆದಿವೆ. ಜೊತೆಗೆ ಮಠಗಳ ಪರಂಪರೆಗೆ ಕೀರ್ತಿ ತಂದವರು. ವಿರಕ್ತ ಪರಂಪರೆಯ ಸಂವಿಧಾನ ಶಿಲ್ಪಿಗಳಾದ ಪರಮ ತಪಸ್ವಿ ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳ ಪರಂಪರೆಯ ವಾರಸುದಾರರೆಂಬ ಖ್ಯಾತಿ ಶ್ರೀಗಳದ್ದು.

ಇಲ್ಲಿದೆ ತುಪ್ಪದ ಬಾವಿ!

ಬಾಳೂರಿನ ಅಡವಿಸ್ವಾಮಿ ಮಠದಲ್ಲೊಂದು ತುಪ್ಪದ ಬಾವಿ ಇದೆ ಎಂಬ ನಂಬಿಕೆ ಇಲ್ಲಿನ ಭಕ್ತ ಸಮುದಾಯದಲ್ಲಿದೆ. ಶ್ರೀಮಠದ ಹಿಂದಿನ ಸ್ವಾಮಿಗಳು ತುಪ್ಪವನ್ನು ನೀರು ಬಳಸಿದಂತೆ ಬಳಸುತ್ತಿದ್ದರು ಎಂಬ ಪ್ರತೀತಿ ಇದೆ. ಅಡವಿಯಲ್ಲಿ ನೆಲೆಸಿದರೂ ಕೂಡ ಇಲ್ಲಿನ ಸ್ವಾಮೀಜಿ ಭಕ್ತರ ಮನೆ– ಮನ ಬೆಳಗಿದ್ದಾರೆ. ಪೂಜಾನಿಷ್ಠ ಪರಂಪರೆಗೆ ಸೇರಿದ ಶ್ರೀಮಠಕ್ಕೆ ಸಾತ್ವಿಕತೆಯ ಸಾಕಾರ ಮೂರ್ತಿಗಳಾಗಿರುವ ಕುಮಾರ ಸ್ವಾಮೀಜಿ ಮಠದ ಪರಂಪರೆಯ ಉಳಿವಿಗೆ ಭಕ್ತ ಸಮುದಾಯದ ಸಹಕಾರದೊಂದಿಗೆ ಕಾರ್ಯೋನ್ಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT