ಹಾವೇರಿ: ‘ಸಂವಿಧಾನದ ಅನುಚ್ಛೇದ 171 ಅನ್ನು ಸಂಪೂರ್ಣವಾಗಿ ತಿದ್ದುಪಡಿ ಮಾಡಿ ಇಲ್ಲವೇವಿಧಾನ ಪರಿಷತ್ತನ್ನು ವಿಸರ್ಜಿಸಿ’ ಎಂದು ಅನುಚ್ಛೇದ 171 ತಿದ್ದುಪಡಿ ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಭಾಸ್ಕರ ಮುದೇನೂರು ಆಗ್ರಹಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅನುಚ್ಛೇದ 171(3) ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಬಗ್ಗೆ ತಿಳಿಸುತ್ತದೆ. ಇದು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ.ಇದು ರಾಜ್ಯದ ಯುವ ಪದವೀಧರರ ಹಕ್ಕುಗಳನ್ನು ಮೊಟಕುಗೊಳಿಸುವುದು ಮಾತ್ರವಲ್ಲದೆ, ಇಂದಿನ ಪದವೀಧರರು ಪ್ರಾಥಮಿಕ ಹಾಗೂ ಪ್ರೌಢಶಾಲಾ ಪ್ರಶಿಕ್ಷಾರ್ಥಿಗಳ ಎಲ್ಲಾ ಸಮಸ್ಯೆಗಳಿಗೆ ನೇರ ಕಾರಣವಾಗಿದೆ ಎಂದು ಹೇಳಿದರು.
ಪದವೀಧರರಿಗೆ ಪದವಿ ಪಡೆದ ವರ್ಷವೇ ಮತದಾನಕ್ಕೆ ಅವಕಾಶ ನೀಡಬೇಕು, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶಿಕ್ಷಕರ ಕ್ಷೇತ್ರಕ್ಕೆ ಮತದಾನ ನೀಡಬೇಕು,ರಾಜ್ಯದ ಅತಿಥಿ ಉಪನ್ಯಾಸಕರ ಖಾಯಂ ನೇಮಕಾತಿಯಾಗಬೇಕು,ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ವಿನಾಯಕ ಎನ್. ಶಿಗ್ಲಿಕರ್, ಜಿಲ್ಲಾ ಘಟಕದ ಅಧ್ಯಕ್ಷ ವೀರೇಂದ್ರ ಶೀಲವಂತರ್ ಇದ್ದರು.