ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ₹67 ಕೋಟಿ ಅನುದಾನ ಬಿಡುಗಡೆಗೆ ಮನವಿ

ರಾಜ್ಯದಾದ್ಯಂತ ₹85 ಕೋಟಿ ವೆಚ್ಚದ ಕಾಮಗಾರಿಗಳು: ಎನ್‌.ಇ.ಜೀವನಮೂರ್ತಿ ಹೇಳಿಕೆ
Last Updated 28 ಜನವರಿ 2021, 13:37 IST
ಅಕ್ಷರ ಗಾತ್ರ

ಹಾವೇರಿ: ‘ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಅಂತರ್ಜಲ ಹೆಚ್ಚಳ, ಕೃಷಿ ಸಂಬಂಧಿತಚಟುವಟಿಕೆಗಳಿಗೆ ಆದ್ಯತೆ ನೀಡಿ ಹಾವೇರಿ ಜಿಲ್ಲೆಯ ಮೂರು ಕ್ಷೇತ್ರಗಳು ಒಳಗೊಂಡಂತೆ ರಾಜ್ಯದ 70 ವಿಧಾನಸಭಾ ಕ್ಷೇತ್ರಗಳಲ್ಲಿ ₹85.22 ಕೋಟಿಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ರಾಜ್ಯ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಎನ್.ಇ.ಜೀವನಮೂರ್ತಿ ತಿಳಿಸಿದರು.

ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, 2020-21ನೇ ಸಾಲಿನ ಮುಂದುವರಿದ ವಿಶೇಷ ಯೋಜನೆಯ ಕಾಮಗಾರಿಗೆ ₹79.82 ಕೋಟಿ ಹಾಗೂ ಮುಂದುವರಿದ ಕಾಮಗಾರಿಗೆ 5.40 ಕೋಟಿ ಸೇರಿ ₹85.22 ಕೋಟಿ ಅನುದಾನ ಅಗತ್ಯವಿದ್ದು, ಮಂಡಳಿಯ ಬಳಿ ₹17.55 ಕೋಟಿ ಲಭ್ಯವಿದ್ದು, 1774 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 196 ಕಾಮಗಾರಿ ಪೂರ್ಣಗೊಳಿಸಲಾಗಿದೆ. ಬಾಕಿ ಕಾಮಗಾರಿ ಪೂರ್ಣಗೊಳಿಸಲು ₹67.67 ಕೋಟಿ ಅನುದಾನ ಕೊರತೆಯಾಗಿದ್ದು, ಈ ಆರ್ಥಿಕ ವರ್ಷದಲ್ಲೇ ಪೂರ್ಣಗೊಳಿಸಲು ಮುಖ್ಯಮಂತ್ರಿಗೆ ಅನುದಾನ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

3 ತಾಲ್ಲೂಕು ಸೇರ್ಪಡೆ:ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಬ್ಯಾಡಗಿ ಹಾಗೂ ಹಾವೇರಿ ತಾಲ್ಲೂಕುಗಳು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಗೆ ಸೇರ್ಪಡೆಗೊಂಡಿವೆ. ಈ ಮೂರು ತಾಲ್ಲೂಕುಗಳಲ್ಲಿ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗದಿಂದ ₹1.97 ಕೋಟಿ ವೆಚ್ಚದ 42 ಕಾಮಗಾರಿಗಳು ಹಾಗೂ ಕೆ.ಆರ್.ಐ.ಡಿ.ಎಲ್. ವತಿಯಿಂದ ₹2 ಕೋಟಿ ವೆಚ್ಚದ 16 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಈ ಪೈಕಿ ಎರಡೂ ಕಾಮಗಾರಿಗಳು ಮುಕ್ತಾಗೊಂಡಿವೆ. ಮೂರು ಕಾಮಗಾರಿಗಳು ಪ್ರಗತಿಯಲ್ಲಿವೆ. ಒಂದು ತಡೆಗೋಡೆ, ಏಳು ಚೆಕ್ ಡ್ಯಾಂ, ಏಳು ಕೆರೆ ಅಭಿವೃದ್ಧಿ, ಎರಡು ರಸ್ತೆ ಅಭಿವೃದ್ಧಿ, ಎರಡು ಸಮುದಾಯ ಭವನ, ಎರಡು ಅಂಗನವಾಡಿ ಹಾಗೂ ಇತರೆ ಒಂದು ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.

70 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ:1995ರಲ್ಲಿ ರಚನೆಯಾದ ಬಯಲುಸೀಮೆ ಅಭಿವೃದ್ಧಿ ಮಂಡಳಿ ಆರಂಭದಲ್ಲಿ ಎಂಟು ಜಿಲ್ಲಾ ವ್ಯಾಪ್ತಿ ಒಳಗೊಂಡಿದ್ದು, ಜಿಲ್ಲೆಗಳ ಪುನರ್ ರಚನೆ ತರುವಾಯು ಹೆಚ್ಚುವರಿಯಾಗಿ ಆರು ಜಿಲ್ಲೆ ಸೇರ್ಪಡೆಗೊಂಡು ಒಟ್ಟು 14 ಜಿಲ್ಲೆಗಳ 58 ತಾಲ್ಲೂಕುಗಳ 70 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿರುತ್ತದೆ. ಈ ಜಿಲ್ಲೆಗಳ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಸೇರಿದಂತೆ 147 ಸದಸ್ಯರನ್ನು ಒಳಗೊಂಡಿದೆ. ಹಾವೇರಿ, ಬಾಗಲಕೋಟೆ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾಸನ, ಕೋಲಾರ, ರಾಮನಗರ, ತುಮಕೂರ ಹಾಗೂ ವಿಜಯಪುರದ ಆಯ್ದ ತಾಲ್ಲೂಕುಗಳಲ್ಲಿ ಮಂಡಳಿ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ.

ಬಯಲು ಸೀಮೆ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಯಯೋಜನೆ ಹಾಕಿಕೊಳ್ಳಲಿದ್ದು, ಮಂಡಳಿಗೆ ಬಿಡುಗಡೆಯಾದ ಅನುದಾನದ ಪೈಕಿ ಶೇ 60ರಷ್ಟು ಅನುದಾನವನ್ನು ಅಂತರ್ಜಲ ಸಂರಕ್ಷಣೆ, ಕೃಷಿ ಸಂಬಂಧಿತ ಚುಟವಟಿಕೆಗಳಿಗಾಗಿ ಬಳಸಲಾಗುವುದು. ಉಳಿದಂತೆ ಶೇ 40ರಷ್ಟು ಅನುದಾನವನ್ನು ರಸ್ತೆ ಇತರ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಬಳಸಲಾಗುವುದು ಎಂದರು.

ಮಾಧ್ಯಮಗೋಷ್ಠಿಯಲ್ಲಿ ಜಿ.ಪಂ.ಅಧ್ಯಕ್ಷ ಏಕನಾಥ ಬಾನುವಳ್ಳಿ, ಮಂಡಳಿಯ ಕಾರ್ಯದರ್ಶಿ ಎಸ್.ವೈ.ಬಸವರಾಜಪ್ಪ, ಉಪಕಾರ್ಯದರ್ಶಿ ಕೃಷ್ಣಾ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT