ರಾಣೆಬೆನ್ನೂರು (ಹಾವೇರಿ): ‘ದೆಹಲಿಯ ಕೆಂಪುಕೋಟೆಯ ಮೇಲಿನ ರಾಷ್ಟ್ರಧ್ವಜ ಇಳಿಸಿ, ಕೆಂಪು ನಿಶಾನೆ (ಭಗವಾಧ್ವಜ) ಹಾರಿಸುವ ಉದ್ದೇಶ ಆರ್.ಎಸ್.ಎಸ್.ನವರದ್ದು. ಭಾರತದ ಸಂವಿಧಾನದ ರಕ್ಷಣೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಬಿಜೆಪಿ ಮತ್ತು ಆರ್ಎಸ್ಎಸ್ನವರನ್ನು ಒದ್ದು ಓಡಿಸಬೇಕು’ ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದರು.
ತಾಲ್ಲೂಕಿನ ಕುಪ್ಪೇಲೂರು ಗ್ರಾಮದಲ್ಲಿ ಶನಿವಾರ ನಡೆದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರ ಬಂದು ಎಷ್ಟು ವರ್ಷ ಆಯ್ತು? ಬಿಜೆಪಿಯವರು ಬಡವರನ್ನು ಬಡವರನ್ನಾಗಿ ಮಾಡ್ತಿದ್ದಾರೆ. ಖಾದಿ ಧ್ವಜ ಬಿಟ್ಟು ಪಾಲಿಸ್ಟರ್ ಧ್ವಜ ಹಾರಿಸುತ್ತಿದ್ದಾರೆ ಎಂದು ಟೀಕಿಸಿದರು.
ದೇಶದ ಬಡಜನ ನೇಯ್ದ ತ್ರಿವರ್ಣ ಧ್ವಜ ಉಪಯೋಗಿಸಲು ಗಾಂಧೀಜಿ ಹೇಳಿದ್ದರು. ಬಿಜೆಪಿಯವರು ಗಾಂಧೀಜಿಯವರ ಆಶಯವನ್ನು ಮಣ್ಣುಪಾಲು ಮಾಡಿದ್ದಾರೆ. ಇದು ‘ಹರ್ ಘರ್ ತಿರಂಗ’ ಅಲ್ಲ, ₹40 ಕೊಡಿ, ₹50ಕೊಡಿ ಎಂದು ಧ್ವಜ ಮಾರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.