ಹಾವೇರಿ: ಸರ್ವಜ್ಞರ ಹುಟ್ಟು, ಇತಿಹಾಸ, ಸ್ಥಳ ಸೇರಿದಂತೆ ಅನೇಕ ನಿಗೂಢಗಳಿವೆ. ಈ ಬಗ್ಗೆ ಸರ್ಕಾರ ಸಂಶೋಧನೆ ನಡೆಸಬೇಕು ಎಂದು ಸಮಾಜದ ಮುಖಂಡ ಎಂ.ಪಿ.ಕುಂಬಾರ ಒತ್ತಾಯಿಸಿದರು.
ನಗರದ ದೇವರಾಜ ಅರಸು ಭವನದಲ್ಲಿ ಬುಧವಾರ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ವಜ್ಞರ ಕುರಿತ ಸಂಶೋಧನೆ, ಅಧ್ಯಯನ ಹಾಗೂ ಪ್ರಾಧಿಕಾರಕ್ಕೆ ಸರ್ಕಾರ ಅನುದಾನ ನೀಡಬೇಕು. ಅಲ್ಲದೇ, ಹಿಂದುಳಿದ ಕುಂಬಾರ ಸಮುದಾಯದ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂದರು.
ಸರ್ವಜ್ಞನ ತ್ರಿಪದಿಗಳು ಸಾರ್ವಕಾಲಿಕವಾಗಿವೆ. ಭವಿಷ್ಯ, ಒಗಟು, ದಾನ, ಕೌಟುಂಬಿಕ, ವೈದ್ಯಕೀಯ, ರಾಜಕೀಯ, ಕಲೆ ಇತ್ಯಾದಿ ವಿಷಯದ ಕುರಿತು ತ್ರಿಪದಿ ರಚಿಸಿದ್ದಾರೆ ಎಂದರು.
ಶಾಸಕ ನೆಹರು ಓಲೇಕಾರ ಮಾತನಾಡಿ, ‘ಕುಂಬಾರ ಸಮುದಾಯವು ಸಣ್ಣದಾಗಿದ್ದು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಬೆಳೆಯಬೇಕಾಗಿದೆ’ ಎಂದರು.
ಉಪನ್ಯಾಸಕ ಡಾ.ಎಸ್.ವಿ. ಚನ್ನಗೌಡ್ರ ಮಾತನಾಡಿ, ಸರ್ವಜ್ಞರ ವಚನವನ್ನು ಕೇಳುತ್ತಿದ್ದರೆ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಮೂಡುತ್ತದೆ’ ಎಂದರು.
ಸರ್ವಜ್ಞರು ಯಾವುದೇ ರಾಜರ ಆಶ್ರಯದಲ್ಲಿ ಇರದೇ ಸ್ವತಂತ್ರವಾಗಿ ಬೆಳೆದರು. ಸಮಾಜದ ಉನ್ನತಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದರು ಎಂದರು.ಸರ್ವಜ್ಞ ಭವನ ನಿರ್ಮಾಣಕ್ಕಾಗಿ ಕುಂಬಾರ ಸಮುದಾಯದಿಂದ ಮನವಿ ಸಲ್ಲಿಸಲಾಯಿತು.
ನಗರಸಭೆ ಸದಸ್ಯ ಮಲ್ಲಿಕಾರ್ಜುನ ಸಾತೇನಹಳ್ಳಿ, ತಹಶೀಲ್ಧಾರ ಶಿವಕುಮಾರ, ಸುಶೀಲವ್ವ ಚಕ್ರಸಾಲಿ, ಬಸವರಾಜ, ರೇವಣಪ್ಪ ಚಕ್ರಸಾಲಿ ಇದ್ದರು.