ಹಾವೇರಿ: ಜಿಲ್ಲೆಯಾದ್ಯಂತ ರೈತರು ಭೂ ತಾಯಿಗೆ ನಮನ ಸಲ್ಲಿಸುವ ಮೂಲಕ ‘ಸೀಗೆ ಹುಣ್ಣಿಮೆ’ಯನ್ನು ಸಂಭ್ರಮದಿಂದ ಆಚರಿಸಿದರು.
ಸೀಗೆ ಹುಣ್ಣಿಮೆ ಹೊತ್ತಿಗೆ ಭೂಮಿ ಮುಂಗಾರು ಫಸಲಿನಿಂದಲೂ, ಎಳ್ಳಮವಾಸ್ಯೆ ಹೊತ್ತಿಗೆ ಹಿಂಗಾರಿನ ಫಸಲಿನಿಂದಲೂ ಕಾಳು ಕಟ್ಟಿಕೊಂಡು ನಿಂತಿರುತ್ತದೆ. ಹೀಗಾಗಿ ಮಣ್ಣಿನ ಮಕ್ಕಳು ಭೂಮಿ ತಾಯಿ ಸಮೃದ್ಧವಾಗಿ ಫಲ ನೀಡಲಿ. ನಮ್ಮನ್ನು ಸದಾ ಕಾಲ ಪೊರೆಯಲಿ ಎಂದು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೆ.
ಗ್ರಾಮೀಣ ಪ್ರದೇಶದ ಒಕ್ಕಲುತನದ ಮನೆಗಳಲ್ಲಿ ಶೇಂಗಾ ಹೋಳಿಗೆ, ಶೇಂಗಾ ಚಟ್ನಿ, ಗುರೆಳ್ಳ ಚಟ್ನಿ, ಕರ್ಜಿಕಾಯಿ, ಸಜ್ಜೆ ರೊಟ್ಟಿ ಮುಂತಾದ ಸಿಹಿ ಖಾದ್ಯಗಳನ್ನು ತಯಾರಿಸಿದ್ದರು. ನಂತರ ಚಕ್ಕಡಿಗಳಿಗೆ ಅಲಂಕಾರ ಮಾಡಿ, ಎತ್ತುಗಳಿಗೆ ಜೂಲು, ಗೆಜ್ಜೆಸರ ಕಟ್ಟಿಕೊಂಡು ಸಾಗಿದ ದೃಶ್ಯ ನೋಡುವುದೇ ಒಂದು ಸೊಗಸು.
ಊಟ ಕಟ್ಟಿಕೊಂಡು, ಕುಟುಂಬದವರೊಂದಿಗೆ ಹೊಲ–ತೋಟಗಳಿಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರು. ಭೂತಾಯಿಗೆ ಎಡೆ ತೋರಿಸಿದ ನಂತರ ‘ಚರಗ’ ಚೆಲ್ಲಿದರು. ನಂತರ ಕುಟುಂಬದ ಸದಸ್ಯರೆಲ್ಲರೂ ಮರಗಳ ನೆರಳಲ್ಲಿ ಕುಳಿತು ಊಟ ಮಾಡಿ ಸಂಭ್ರಮಿಸಿದರು.