ತಿಳವಳ್ಳಿ: ಮುಂಗಾರು ಮುಗಿದು ಹಿಂಗಾರು ಬರಮಾಡಿಕೊಳ್ಳುವ ಹಬ್ಬ ಸೀಗೆ ಹುಣ್ಣಿಮೆಯನ್ನು ತಿಳವಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತ ಸಮೂಹ ತಮ್ಮ ಹೊಲಗದ್ದೆಗಳನ್ನು ಪೂಜಿಸುವ ಮೂಲಕ ಮಂಗಳವಾರ ಸಂಭ್ರಮದಿಂದ ಆಚರಿಸಿದರು.
ದಸರಾ ಹಬ್ಬ ಮುಗಿಯುತ್ತಿದಂತೆ ಬರುವ ಹಬ್ಬವೇ ಸೀಗೆ ಹುಣ್ಣಿಮೆ ಇಡೀ ರೈತ ಸಮೂಹದಲ್ಲಿ ಒಂದು ವಿಶಿಷ್ಟ ಸ್ಥಾನ ಹೊಂದಿದೆ. ಹೊಲದ ಸುತ್ತಲೂ ಚರಗ ಚೆಲ್ಲಿ ಹೊಲದಲ್ಲಿ ಐದು ಕಲ್ಲುಗಳನ್ನು ಇಟ್ಟು ಅವುಗಳಿಗೆ ಸುಣ್ಣ ಮತ್ತು ಕೆಮ್ಮಣ್ಣು ಹಚ್ಚಿ, ಪಾಂಡವರು ಎಂದು ಪೂಜಿಸಲಾಗುತ್ತದೆ. ನಂತರ ವಿವಿಧ ಪದಾರ್ಥಗಳ ನೈವೇದ್ಯ ಮಾಡಲಾಗುತ್ತದೆ. ಪಾಂಡವರ ಮೂರ್ತಿಗಳ ಹಿಂದೆ ಕಳ್ಳರ ಮೂರ್ತಿಗಳನ್ನು ಇಟ್ಟು ಪೂಜಿಸುವ ವಾಡಿಕೆಯೂ ಇದೆ.
ನಂತರ ಮನೆಯಿಂದ ತಂದ ಜೋಳದ ರೊಟ್ಟಿ, ಪುಂಡಿ ಪಲ್ಲೆ, ಖರ್ಚಿಕಾಯಿ, ಕುಂಬಳಕಾಯಿ ಕಡುಬು, ಹೋಳಿಗೆ, ಕರಿಬುತ್ತಿ, ಬಿಳಿಬುತ್ತಿ, ವಿವಿಧ ಚಟ್ನಿಗಳು, ಸಿಹಿ ತಿನಿಸುಗಳ ಸಾಮೂಹಿಕ ಭೋಜನ ನಡೆಯಿತು.