ಹಾನಗಲ್: ‘ಎಸ್ಟಿ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಸೇರಿದಂತೆ ಸಾಕಷ್ಟು ಪ್ರಯೋಜನಗಳು ಬಿಜೆಪಿ ನೇತೃತ್ವದ ಸರ್ಕಾರದಿಂದ ದೊರೆತಿವೆ. ಉಪ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ಬಿಜೆಪಿ ಬೆನ್ನಿಗೆ ನಿಲ್ಲುತ್ತದೆ’ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ತಾಲ್ಲೂಕಿನ ಆಡೂರ ಗ್ರಾಮದಲ್ಲಿ ಶನಿವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಸಂಸದ ಶಿವಕುಮಾರ ಉದಾಸಿ ಕುಶಲಮತಿ ರಾಜಕಾರಣಿ. ಶಿವಕುಮಾರ ಅವರು ರಾಜ್ಯ ಬಿಜೆಪಿ ಮಟ್ಟಿಗೆ ಅರುಣ ಜೇಟ್ಲಿ ಇದ್ದಂತೆ’ ಎಂದರು.
ಶಿವಕುಮಾರ ಉದಾಸಿ ಮಾತನಾಡಿ, ‘ಇದು ಚುನಾವಣೆ ಸಮಯ. ನಾವು ರಾಜಕಾರಣಿಗಳು ಮತದಾರರ ಬಳಿಗೆ ಬರುತ್ತೇವೆ. ಮತದಾರರು ಯೋಚಿಸಿ ಮತ ನೀಡಬೇಕು. ಮುಂದಿನ 5 ವರ್ಷ ನೀವೇ ಚುನಾಯಿಸಿದ ಪ್ರತಿನಿಧಿ ಮನೆ ಮುಂದೆ ಕೈ ಮುಗಿದು ನಿಲ್ಲುವ ಸ್ಥಿತಿ ಬೇಡ. ಸಮರ್ಥರನ್ನು ಗೆಲ್ಲಿಸಿ’ ಎಂದರು.
ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ‘ನೀರಾವರಿ ಸೌಲಭ್ಯ, ಬೆಳೆವಿಮೆ ಜಾಗೃತಿಗೆ ಹಾನಗಲ್ ತಾಲ್ಲೂಕು ಹೆಸರಾಗಿದೆ. ಇದಕ್ಕೆ ಸಿ.ಎಂ.ಉದಾಸಿ ಅವರ ಕರ್ತೃತ್ವ ಶಕ್ತಿ ಕಾರಣವಾಗಿದೆ’ ಎಂದರು.