ಹಾವೇರಿ: ‘ಅಂಕಿ-ಅಂಶಗಳು ಆಧರಿಸಿ ತಯಾರಿಸುವ ಕ್ರಿಯಾಯೋಜನೆ ಮೇಲೆ ವರ್ಷದ ಅಭಿವೃದ್ಧಿ ಅವಲಂಬಿತವಾಗಿರುತ್ತದೆ. ಹಾಗಾಗಿ ಸಾಂಖ್ಯಿಕ ಇಲಾಖೆ ಅಭಿವೃದ್ಧಿ ಕೇಂದ್ರವಾಗಬೇಕು’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರೊ.ಪಿ.ಸಿ.ಮಹಾಲನೋಬಿಸ್ ಅವರ ಜನ್ಮ ದಿನದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರೊ.ಪಿ.ಸಿ.ಮಹಾಲನೋಬಿಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಪ್ರಸಕ್ತ ವರ್ಷ ದಿನಾಚರಣೆಗಾಗಿ ‘ಸುಸ್ಥಿರ ಅಭಿವೃದ್ಧಿಗಾಗಿ ಅಗತ್ಯ ದತ್ತಾಂಶ’ ಎಂಬ ವಿಷಯವನ್ನು ಆಯ್ಕೆ ಮಾಡಲಾಗಿದೆ ಎಂದರು.
ಜೀವನ ಉತ್ತಮಗೊಳಿಸಲು ಹಾಗೂ ಅಭಿವೃದ್ಧಿಗೆ ಸಂಖ್ಯಾಶಾಸ್ತ್ರ ಮುಖ್ಯ ಎಂದು ತೋರಿಸಿಕೊಟ್ಟವರು ಸಾಂಖ್ಯಿಕ ತಜ್ಞ ಪ್ರೊ.ಪಿ.ಸಿ.ಮಹಾಲನೋಬಿಸ್. ಅವರು ಸಂಖ್ಯಾ ಶಾಸ್ತ್ರ ಪಿತಾಮಹ ಎನಿಸಿಕೊಂಡಿದ್ದಾರೆ. ಇಂದು ಸಂಖ್ಯಾ ಶಾಸ್ತ್ರವನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ.
ಪ್ರೊ.ಪ್ರಶಾಂತ ಚಂದ್ರ ಮಹಾಲನೋಬಿಸ್ ಅವರು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೂ ಬಹಳ ಶ್ರಮಪಟ್ಟರು. ಅವರು ವಿಜ್ಞಾನ ವಿಷಯ ಓದಿದ್ದರೂ ಸಹ ಲಂಡನ್ನಿಂದ ಬರುವ ಸಮಯದಲ್ಲಿ ಅವರು ಓದಿದ ಪುಸ್ತಕಗಳ ಪ್ರಭಾವದಿಂದ ಸಂಖ್ಯಾ ಶಾಸ್ತ್ರದ ಕಡೆ ಒಲವು ಮೂಡಿತ್ತು. ಸಂಖ್ಯಾಶಾಸ್ತ್ರದಲ್ಲಿ ಅಧ್ಯಯನ ಮಾಡಿದ ಅವರು ‘ಸ್ಯಾಂಪಲ್ ಸರ್ವೆ’ ಮೊದಲು ಆರಂಭಿಸಿದರು. ಅಂದು ಆರಂಭಿಸಿದ ಸ್ಯಾಂಪಲ್ ಸರ್ವೆ ಇಂದು ಬೇರೆ ಬೇರೆ ವಿಷಯಗಳಲ್ಲಿ ಮಾಡಲಾಗುತ್ತಿದೆ. ಪ್ರೊ.ಪಿ.ಸಿ.ಮಹಾಲನೋಬಿಸ್ ಅವರನ್ನು ವರ್ಷ ಪೂರ್ತಿ ನೆನೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಪಿಒ ಎನ್.ಕೆ. ನಿರ್ಮಲಾ, ಕುಮಾರ ಮಣ್ಣವಡ್ಡರ, ಉಪನ್ಯಾಸಕ ಸಂತೋಷಕುಮಾರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜೆ.ಆರ್. ಪಾಟೀಲ, ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಇದ್ದರು.