ಹಾವೇರಿ: ಅಸ್ಪೃಶ್ಯತೆ ಒಳಗೊಂಡಂತೆ ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಬೀದಿ ನಾಟಕಗಳು ಒಂದು ಆಯುಧವಾಗಲಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶಪ್ಪ ಹೇಳಿದರು.
ನಗರದ ಜಿಲ್ಲಾ ವಾರ್ತಾ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ಅಸ್ಪೃಶ್ಯತಾ ನಿವಾರಣೆ ಕುರಿತು ನಾಟಕ ರಚನಾ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಸ್ಪೃಶ್ಯತೆ ಎಂಬುವುದು ಕೇವಲ ಜಾತಿಗೆ ಮಾತ್ರ ಸೀಮಿತಗೊಳ್ಳದೇ, ಸಮಾಜದಲ್ಲಿರುವ ಎಲ್ಲಾ ಬಗೆಯ ಅಸ್ಪೃಶ್ಯತೆಯ ನಿವಾರಣೆಯ ಧ್ವನಿಯಾಗಿ, ಒಂದು ಶಕ್ತಿಯಾಗಿ ಬೀದಿನಾಟಕ ರಚನೆಯಾಗಲಿ ಎಂದರು.
ಸಮಾಜ ಪರಿವರ್ತನೆಗೆ ಬಹುದೊಡ್ಡ ಪಾತ್ರ ವಹಿಸಿದ್ದ ಬೀದಿ ನಾಟಕಗಳು ಇಂದು ಕಡಿಮೆಯಾಗಿವೆ. ಕಲಾವಿದರು ಜನಪ್ರಿಯತೆಯ ಬೆನ್ನುಬಿದ್ದು ಖಾಸಗಿ ವಾಹಿನಿಗಳ ರಿಯಾಲಿಟಿ ಶೋಗಳಿಗೆ ಹೋಗುತ್ತಿದ್ದಾರೆ. ಬೀದಿ ನಾಟಕ ಸಾಹಿತ್ಯಕ್ಕೆ ಇತರ ಸಾಹಿತ್ಯ ಪ್ರಕಾರಗಳಿಗಿಂತ ಭಿನ್ನವಾದ ಶಕ್ತಿ ಮತ್ತು ಧ್ವನಿ ಇದೆ. ಲೇಖಕರು, ಬರಹಗಾರರು, ಕಲಾವಿದರು ಬೀದಿ ನಾಟಕ ಮಾಧ್ಯಮವನ್ನು ಬಳಸಿಕೊಂಡು ಸಾಮಾಜಿಕ ಬದಲಾವಣೆಯ ನಿಟ್ಟಿನಲ್ಲಿ ಮುಂದಾಗುವಂತೆ ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಪ್ರತ್ರಾಂಕಿತ ವ್ಯವಸ್ಥಾಪಕ ಆಂಜನೇಯ ಮಾತನಾಡಿ, ದೌರ್ಜನ್ಯ ತಡೆಗಟ್ಟಲು ಅನೇಕ ಕಾಯಿದೆಗಳು ಜಾರಿಗೆ ಬಂದಿದ್ದು, ಕಾಯ್ದೆಗಳ ಅರಿವು ಮೂಡಿಸಲು ಕಲಾವಿದರು ನಾಟಕ ರಚನೆ ಮಾಡಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಮಾತನಾಡಿದರು. ಶಿಬಿರಾರ್ಥಿಗಳಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಜಿಲ್ಲಾ ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಸಾಹಿತಿ ಸತೀಶ ಕುಲಕರ್ಣಿ ಇದ್ದರು. ಶಿಬಿರಾರ್ಥಿಗಳಾದ ಶರೀಫ ಮಾಕಪ್ಪನವರ ಹಾಗೂ ರೇಣುಕಾ ಚಲವಾದಿ ಪ್ರಾರ್ಥನಾ ಗೀತೆ ಹಾಡಿದರು. ಗಣೇಶ ಗುಡಗುಡಿ, ಪ್ರವೀಣ ಕರಿಯಣ್ಣವರ, ಸತೀಶ ತಿಮ್ಮಣ್ಣವರ, ಪ್ರಕಾಶ ದಿಡಗೂರ, ಮಧುಕುಮಾರ ಹರಿಜನ ಇದ್ದರು.