ಹಾವೇರಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹೊಸ ಬಸ್ ಪಾಸ್ ವಿತರಣೆ ಮಾಡುವವರೆಗೂ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ಆಗ್ರಹಿಸಿಎಸ್ಎಫ್ಐ ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಅವಧಿ ವಿಸ್ತರಣೆಯ ಆದೇಶ ಉಲ್ಲಂಘಿಸಿ ವಿದ್ಯಾರ್ಥಿಗಳಿಂದ ಟಿಕೆಟ್ ಪಡೆದು ವಿದ್ಯಾರ್ಥಿಗಳೊಂದಿಗೆ ವಾಗ್ವಾದ ಮಾಡಿ ಪರೀಕ್ಷೆ ಸಮಯಕ್ಕೆ ತಡ ಮಾಡಿದ ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂದುಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದರು.
ವಿದ್ಯಾರ್ಥಿ ಶಿವರಾಜ್ ಗೊಟಗೊಡಿ ಮಾತನಾಡಿ, ‘ಬಸ್ ಪಾಸ್ ಅವಧಿ ವಿಸ್ತರಣೆ ಮಾಡಿದ್ದಾರೆ, ಆದೇಶ ನೋಡಿ ಎಂದರೂ ಸಾರಿಗೆ ನೌಕರರು ಟಿಕೆಟ್ ತೆಗೆದುಕೊಳ್ಳಿ ಎಂದು ವಾಗ್ವಾದ ಮಾಡಿ ಫೋಟೊ ತೆಗೆದು ಬೆದರಿಕೆ ಹಾಕಿದರು ಎಂದು ಅಳಲು ತೋಡಿಕೊಂಡರು.
ಸಾರಿಗೆ ಅಧಿಕಾರಿಗಳು ಮನವಿ ಸ್ವೀಕರಿಸಿ, ಟಿಕೆಟ್ ನೀಡಿದ ಸಾರಿಗೆ ನೌಕರರ ಮೇಲೆ ಕ್ರಮ ಜರುಗಿಸಲಾಗುವುದು, ಟಿಕೆಟ್ ಹಣವನ್ನು ವಿದ್ಯಾರ್ಥಿಗಳಿಗೆ ಹಿಂದಿರುಗಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಎಸ್ಎಫ್ಐ ಮುಖಂಡರಾದ ಮಹೇಶ್ ನರೇಗಲ್, ಅರುಣ್, ಶಿವರಾಜ್, ಕಿರಣ ಅಡಗಂಟ್ಟಿ ವಿದ್ಯಾರ್ಥಿಗಳಾದ ಕಿರಣ ಜಿ.ಎಸ್, ಅಭಿಷೇಕ ಎನ್.ಬಿ, ನವೀನ ಎಸ್.ಕೆ, ಶಶಾಂಕ, ಮೋಹನ್, ಶಿವಕುಮಾರ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.