ಹಾವೇರಿ: ಸಮೀಪದ ಸಂಗೂರು ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಹಂಗಾಮಿನ ಕಬ್ಬು ಅರೆಯುವ ಕಾರ್ಯಕ್ಕೆ ಭಾನುವಾರ ಚಾಲನೆ ಕೊಡಲಾಯಿತು.
ಕಾರ್ಖಾನೆಯಲ್ಲಿ ಯಂತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಇದನ್ನೂ ಮುನ್ನ ರೈತರ ಹಲವು ಬೇಡಿಕೆಗಳ ಪೈಕಿ ಕಾರ್ಖಾನೆ ಗುತ್ತಿಗೆದಾರರಾದ ಜಿ.ಎಂ. ಶುಗರ್ಸ್ನವರು ಕೆಲವೊಂದಷ್ಟಕ್ಕೆ ಸ್ಪಂದಿಸಿದ್ದಾರೆ. ಕಳೆದ ವರ್ಷದ ಕಬ್ಬು ಬಾಕಿ, ಪ್ರತಿ ಟನ್ ಕಬ್ಬಿಗೆ 125 ಗ್ರಾಂ ಸಕ್ಕರೆ ಕೊಡುವುದು, ರೈತರಿಗೆ ₹500ಗೆ ಒಂದು ಟನ್ ಪ್ರೆಸ್ ಮಡ್ಡಿ ಕೊಡುವುದು, ₹200ಕ್ಕೆ ಒಂದು ಟನ್ ಬೂದಿ ಕೊಡುವುದು, ರೈತರಿಗೆ ಮೂಲಸೌಕರ್ಯ ಒದಗಿಸುವುದು, ರೈತರಿಗೆ ಕ್ಯಾಂಟಿನ್ ಶುರು ಮಾಡುವುದಕ್ಕೆ ಗುತ್ತಿಗೆದಾರರು ಒಪ್ಪಿದ್ದಾರೆ. ಜತೆಗೆ, ಈ ವರ್ಷದ ಹಂಗಾಮಿನ ಟನ್ ಕಬ್ಬಿಗೆ ₹2851 ಕೊಡಲು ಒಪ್ಪಿಕೊಂಡಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಈ ಎಲ್ಲ ಬೇಡಿಕೆ ಈಡೇರಿಸುವ ಭರವಸೆ ಮೇರೆಗೆ ಪೂಜೆ ಮಾಡಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ಫಕೀರಪ್ಪ, ಚಂದ್ರಪ್ಪ ಪುಟ್ಟಣ್ಣನವರ, ಮಂಜುನಾಥ ಬಾಳಿಕಾಯಿ, ಸಹದೇವಪ್ಪ ಜೆಡೆಣ್ಣನವರ, ರವಿ ಗಂಟಿ, ಶಂಬಣ್ಣ ಸಜ್ಜನ, ನಿಂಗಪ್ಪ ಸಜ್ಜನ, ವೀರೇಶ ಸೋಮಕ್ಕನವರ, ಹೇಮಣ್ಣ ಹೆಗ್ಗಣ್ಣನವರ ಇದ್ದರು.