ಹಾವೇರಿ: ‘ಪ್ರತಿಯೊಬ್ಬ ರೈತರು ಮಣ್ಣು ಪರೀಕ್ಷೆ ಮಾಡಿಸಿ, ಮಣ್ಣು ಆರೋಗ್ಯ ಚೀಟಿಯ ಪ್ರಕಾರ ಬೆಳೆಗಳಿಗೆ ಅನುಗುಣವಾಗಿ ರಸಗೊಬ್ಬರಗಳನ್ನು ನೀಡಬೇಕು. ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಹಾವೇರಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಆರ್.ಕೆ. ಕುಡಪಲಿ ಹೇಳಿದರು.
ಕೃಷಿ ಇಲಾಖೆ ಮತ್ತು ನೀಡ್ಸ್ ಸಂಸ್ಥೆ ರಾಣೆಬೆನ್ನೂರು ಸಂಯುಕ್ತಾಶ್ರಯದಲ್ಲಿ ಹಾವೇರಿ ನಗರದ ಇಜಾರಿಲಕಮಾಪುರದಲ್ಲಿರುವ ದುಂಡಿಬಸವೇಶ್ವರ ದೇವಸ್ಥಾನದಲ್ಲಿ ನಡೆದ ‘ಮಣ್ಣು ಆರೋಗ್ಯ ಅಭಿಯಾನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಣೆಬೆನ್ನೂರು ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಸಂಪನ್ಮೂಲ ವ್ಯಕ್ತಿ ಡಾ.ಜಗದೀಶ ಮಾತನಾಡಿ, ‘ಮಣ್ಣು ಸಾವಯವ ವಸ್ತು, ನಿರ್ದಿಷ್ಟವಾಗಿ ಬೆಳೆ ಉತ್ಪನ್ನ ದೃಷ್ಟಿಯಿಂದ ಅನೇಕ ಮುಖ್ಯ ಕಾರ್ಯಗಳನ್ನು ನೆರವೇರಿಸುತ್ತದೆ. ಅದು ಯಶಸ್ವಿ ಬೆಳೆ ಉತ್ಪನ್ನಕ್ಕೆ ಅಗತ್ಯವಾದ ಎಲ್ಲ ಭೌತಿಕ ಸ್ಥಿತಿಗತಿಗಳ ಪಾಲನೆಗೆ ಹೊಣೆಯಾಗಿರುತ್ತದೆ’ ಎಂದರು.
ರೈತ ಮುಖಂಡ ಸುರೇಶ ಚಲವಾದಿ ಮಣ್ಣು ಪರೀಕ್ಷೆಯ ಮಹತ್ವ ವಿವರಿಸಿದರು. ವಕೀಲರಾದ ಚಂದ್ರಶೇಖರಾ ಜಾವಗಲ್, ರೈತ ಮುಖಂಡರಾದ ಶಂಕ್ರಣ್ಣ ನವಲಿ, ಶಿವಪ್ಪ ಬೂದಿಹಾಳ, ನಾಗಪ್ಪ ಬೂದಿಹಾಳ, ವೀರಭದ್ರಪ್ಪ ಜೋಗುರ, ಬಸಣ್ಣ ಹಾರೋಗೊಪ್ಪ, ಸಂಪನ್ಮೂಲ ವ್ಯಕ್ತಿಗಳಾದಂತ ತಿಪ್ಪೇಶ ಕನ್ನಮ್ಮನವರ, ವಿಶ್ವನಾಥ ರೆಡ್ಡಿ ಇದ್ದರು.