ಹಾವೇರಿ: ಆಹಾರ ಉದ್ದಿಮೆಗಳಲ್ಲಿ ಯುವಕರಿಗೆ, ರೈತರಿಗೆ ಹಾಗೂ ಸಹಕಾರ ಸಂಸ್ಥೆಗಳಿಗೆ ಇರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಇಂದಿರೇಶ ಕೆ.ಎಂ. ಸಲಹೆ ನೀಡಿದರು.
‘ಆತ್ಮನಿರ್ಭರ ಭಾರತ’ ಶಿರ್ಷಿಕೆಯಡಿ, ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ, ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ದೇವಿಹೊಸೂರ ಹಾವೇರಿ ಜಂಟಿಯಾಗಿ ಆಹಾರ ಸಂರಕ್ಷಣಾ ಕೈಗಾರಿಕಾ ಮಂತ್ರಾಲಯದ ಪ್ರಾಯೋಜತ್ವದಲ್ಲಿ ‘ಪ್ರಧಾನ ಮಂತ್ರಿಗಳ ಕಿರು ಆಹಾರ ಸಂರಕ್ಷಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ’ ವಿಷಯ ಕುರಿತು ಶುಕ್ರವಾರ ನಡೆದ‘ರಾಜ್ಯ ಮಟ್ಟದ ಅಂತರ್ಜಾಲ ಕಾರ್ಯಾಗಾರ’ದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ತಮಿಳನಾಡು ರಾಜ್ಯದ ತಂಜಾವೂರು ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಡಾ. ಅನಂತರಾಮಕೃಷ್ಣನ್ ಅವರು ಸರ್ಕಾರದಿಂದ ದೊರೆಯುವ ಆರ್ಥಿಕ ಸಹಕಾರ ಹಾಗೂ ತರಬೇತಿಗಳ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ತಾಂತ್ರಿಕ ಸಂವಾದದಲ್ಲಿ ಕಾರ್ಯಾಗಾರದ ವಿಷಯಗಳನ್ನು ಕುರಿತು ವಿಷಯ ತಜ್ಞರಾದ ಬಿ.ಶಿವರಾಜ, ಡಾ.ಚಿದಾನಂದ, ಜಗನ್ನಾಥ, ಪ್ರೊ.ಪ್ರತಾಪಕುಮಾರ ಶೆಟ್ಟಿ ಎಚ್., ಸತೀಶಚಂದ್ರ, ಡಾ.ಅಶೋಕ ಆಲೂರ ಅವರು ರೈತರು, ಉದ್ದಿಮೆದಾರರು ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಿದರು.
ರಾಜ್ಯದ ವಿವಿಧ ಭಾಗಗಳಿಂದ 200ಕ್ಕೂ ಹೆಚ್ಚಿನ ರೈತ ಉತ್ಪಾದಕ ಕಂಪನಿಗಳ ಸದಸ್ಯರು, ಯುವ ಉದ್ದಿಮೆದಾರರು ಹಾಗೂ ವಿದ್ಯಾರ್ಥಿಗಳು ವೆಬಿನಾರ್ನಲ್ಲಿ ಭಾಗವಹಿಸಿದ್ದರು.
ರಾಜ್ಯ ಮಟ್ಟದ ಅಂತರ್ಜಾಲ ಕಾರ್ಯಾಗಾರದ ಅಧ್ಯಕ್ಷರಾದ ಡಾ.ಲಕ್ಷೀನಾರಾಯಣ ಹೆಗಡೆ, ಡಾ.ಪ್ರಭುದೇವ ಅಜ್ಜಪ್ಪಳವರ ಹಾಗೂ ಆಯೋಜಕರಾದ ಡಾ.ತಿಪ್ಪಣ್ಣ ಕೆ.ಎಸ್, ಡಾ.ಸಿದ್ದನಗೌಡ ಯಡಚಿ, ಡಾ.ಕಿರಣ್ಕುಮಾರ ನಾಗಜ್ಜನವರ, ಡಾ.ಕೃಷ್ಣ ಕುರುಬೆಟ್ಟ, ಡಾ.ರವಿಕುಮಾರ ಬಿ. ಮತ್ತು ಡಾ.ವಿನಯ್ಕುಮಾರ ಎಂ.ಎಂ. ಪಾಲ್ಗೊಂಡಿದ್ದರು.