ಕುಮಾರಪಟ್ಟಣ: ಮಲೆನಾಡು ಭಾಗ ಸೇರಿದಂತೆ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶುಕ್ರವಾರ ತುಂಗಭದ್ರಾ ನದಿ ಸಮೀಪದ ಕೊಡಿಯಾಲ ಗ್ರಾಮದ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಮೈದುಂಬಿ ಹರಿಯಿತು.
ಈಗಾಗಲೇ ತುಂಗಭದ್ರಾ ನದಿ ಪಾತ್ರದ ಗ್ರಾಮಗಳಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಜನರು ಸೇರಿದಂತೆ ಜಾನುವಾರುಗಳನ್ನು ನದಿ ಸಮೀಪದ ಬಿಡದಂತೆ ಡಂಗೂರ ಸಾರಲಾಗಿದೆ.
‘ನದಿ ನೀರಿನ ಒಳ ಹರಿವು ಹೆಚ್ಚಾಗಿದ್ದು, ಇದೇ ರೀತಿಯಾಗಿ ಮಳೆ ಮುಂದುವರೆದರೆ ನದಿ ಪಾತ್ರದ ಊರುಗಳು ಪ್ರವಾಹ ಭೀತಿ ಎದುರಿಸುವ ಸಾಧ್ಯತೆ ಇದೆ. ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಸದ್ಯಕ್ಕೆ ಆತಂಕ ತಂದೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿಲ್ಲ’ ಎಂದು ರೈತ ಮುಖಂಡ ಈರಣ್ಣ ಹಲಗೇರಿ ಹೇಳಿದರು.
‘ಮೇಲ್ಭಾಗದಲ್ಲಿ ಮಳೆ ಹೆಚ್ಚಾಗಿ ಹೆಚ್ಚುವರಿ ನೀರು ನದಿಗೆ ಬಿಟ್ಟರೆ ನದಿ ದಂಡೆಯಲ್ಲಿರುವ ಮುಷ್ಟೂರು, ಮುದೇನೂರು, ಮಾಕನೂರು, ಕವಲೆತ್ತು, ಕೊಡಿಯಾಲ, ನಲವಾಗಲ, ನದಿಹರಳಹಳ್ಳಿ, ಐರಣಿ, ಹಿರೇಬಿದರಿ ಗ್ರಾಮಗಳ ಕೆಲ ಮನೆಗಳು ಸೇರಿದಂತೆ ರೈತರ ಹೊಲ ಗದ್ದೆಗಳಿಗೆ ನೀರು ನುಗ್ಗಲಿದೆ’ ಎಂದರು.
;ಮುದೇನೂರು ರಸ್ತೆ ಪಕ್ಕದಲ್ಲಿರುವ ಮಾಕನೂರು ಗ್ರಾಮದ ಬಹುಪಾಲು ರೈತರ ಜಮೀನು ಮುಳುಗಡೆಯಾಗಲಿದೆ. ಇದರಿಂದ ನಾಟಿ ಮಾಡಿದ ಭತ್ತದ ಪಸಲಿಗೆ ಹಿನ್ನೆಡೆಯಾಗಲಿದೆ. ಇಟ್ಟಿಗೆ ಭಟ್ಟಿಗಳಿಗೆ ರೈತರು ಮಣ್ಣು ಮಾರಿಕೊಂಡ ಹಿನ್ನೆಲೆಯಲ್ಲಿ ಪ್ರತಿವರ್ಷ ಈ ಭಾಗದ ರೈತರು ಮುಳುಗಡೆ ಭೀತಿ ಎದುರಿಸುವಂತಾಗಿದೆ’ ಎಂದರು.