ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದುಂಬಿದ ಮದಗ, ನೆರೆಯಲ್ಲೂ ಪ್ರವಾಸಿಗರ ದಂಡು!

ಕಣ್ಮನ ಸೆಳೆಯುತ್ತಿದೆ ಧುಮ್ಮಿಕ್ಕುತ್ತಿರುವ ಜಲಪಾತದ ದೃಶ್ಯ
Last Updated 16 ಆಗಸ್ಟ್ 2019, 20:01 IST
ಅಕ್ಷರ ಗಾತ್ರ

ಹಿರೇಕೆರೂರ: ಕುಮದ್ವತಿ ನದಿ ಉಕ್ಕಿ ಹರಿಯುತ್ತಿರುವ ಕಾರಣ ತಾಲ್ಲೂಕಿನ ಐತಿಹಾಸಿಕ ಮದಗ ಮಾಸೂರು ಕೆರೆಗಳು ಮೈದುಂಬಿವೆ. ಸುತ್ತಲಿನ ಹಚ್ಚ ಹಸಿರು ಗುಡ್ಡಗಳ ಸುಂದರ ದೃಶ್ಯವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಆದರೆ, ಮಾಯದಂಥ ಮಳೆ ಬಂತಣ್ಣ... ಜಾನಪದಲ್ಲಿ ಹೇಳುವಂತೆ ಕೆಂಚಮ್ಮನ ಬಲಿದಾನದಿಂದ ಹೆಸರಾದ ಈ ಕೆರೆಯು ಆಳುವವರ ನಿರ್ಲಕ್ಷದಿಂದ ವಿನಾಶದತ್ತ ಸಾಗಿದೆ.

ಹಿರೇಕೆರೂರಿನಿಂದ ಸುಮಾರು 20 ಕಿ.ಮೀ. ದೂರದ ತಾಲ್ಲೂಕಿನ ಗಡಿ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಮದಗ ಮಾಸೂರು ಕೆರೆಗೆ ಮಕರ ಸಂಕ್ರಾಂತಿಯ ದಿನ ಹೆಚ್ಚು ಜನ ಆಗಮಿಸುತ್ತಾರೆ. ಈಗ ಮೈದುಂಬಿ ನಯನ ಮನೋಹರವಾಗಿ ಹರಿಯುತ್ತಿರುವ ಹಾಗೂ ಭೋರ್ಗರೆಯುವ ಜಲಪಾತದ ಸೊಬಗು ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತಿದೆ. ನಿತ್ಯ ವಿವಿಧ ಭಾಗಗಳಿಂದ ಆಗಮಿಸುವ ಪ್ರವಾಸಿಗರು ತುಂಬಿದ ಕೆರೆ ಹಾಗೂ ಜಲಪಾತದ ಸೊಬಗನ್ನು ಸವಿದು ಸಂತಸ ಪಡುತ್ತಿದ್ದಾರೆ.

ಬೃಹತ್ ಕೋಡಿಯ ಮೇಲೆ ಹರಿಯುವ ನೀರಿನ ದೃಶ್ಯ ರಮಣೀಯವಾಗಿದೆ. ಕೋಡಿಯಿಂದ ಕೇವಲ 50 ಮೀಟರ್ ದೂರದಲ್ಲಿ ಎರಡು ಪರ್ವತಗಳನ್ನು ಸೀಳಿಕೊಂಡು ಎತ್ತರದಿಂದ ಬಂಡೆಗಲ್ಲುಗಳ ಮೇಲಿಂದ ಧುಮ್ಮಿಕ್ಕುವ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ.

ಮದಗ ಮಾಸೂರು ಕೆರೆಗೆ ದಕ್ಷಿಣ ಭಾಗಕ್ಕಿರುವ ಶಿಕಾರಿಪುರದ ಕಡೆಯಿಂದ ಕುಮದ್ವತಿ ಹರಿದು ಬಂದು ಸೇರುತ್ತಾಳೆ. ಮುಂದೆ ಕೆರೆಯ ಕೋಡಿಯಿಂದ ಮಾಸೂರು, ರಟ್ಟೀಹಳ್ಳಿ ಮೂಲಕ ಸಾಗುತ್ತಾಳೆ. ಎರಡು ಗುಡ್ಡಗಳ ಮಧ್ಯೆ ನಿರ್ಮಾಣಗೊಂಡು ನಂತರ ಶಿಥಿಲವಾಗಿದ್ದ ಮದಗ ಮಾಸೂರು ಕೆರೆಯನ್ನು 1858ರಲ್ಲಿ ಬ್ರಿಟಿಷ್ ಸರ್ಕಾರ ವಿಶೇಷ ಆಸಕ್ತಿಯಿಂದ ದುರಸ್ತಿಗೊಳಿಸಿತು ಎನ್ನಲಾಗಿದೆ.

ಕೆರೆಯ ಕೋಡಿ ಮತ್ತು ತೂಬನ್ನು ವ್ಯವಸ್ಥಿತಗೊಳಿಸಿ ಎಂಟೂವರೆ ಮೈಲು ಉದ್ದದ ಬಲದಂಡೆ ಕಾಲುವೆ ಹಾಗೂ ಐದೂವರೆ ಮೈಲು ಉದ್ದದ ಎಡದಂಡೆ ಕಾಲುವೆ ನಿರ್ಮಿಸಿ, 3 ಸಾವಿರ ಎಕರೆ ಕೃಷಿ ಜಮೀನಿಗೆ ನೀರುಣಿಸುವಂತೆ ಮಾಡಿದ್ದಾರೆ. 1889ರಲ್ಲಿ ಕಾಮಗಾರಿ ಮುಕ್ತಾಯವಾದ ಬಗ್ಗೆ ದಾಖಲೆಗಳಿವೆ.

‘ಬಚಾವತ್ ಆಯೋಗದ ಪ್ರಕಾರ ಮದಗ ಮಾಸೂರು ಕೆರೆ ನೀರಾವರಿ ಯೋಜನೆಗೆ 2.71 ಟಿ.ಎಂ.ಸಿ ಅಡಿ ನೀರನ್ನು ನಿಗದಿಪಡಿಸಿದೆ. ರಾಜ್ಯ ಸರ್ಕಾರವು 1974ರಲ್ಲಿ ಕೋಡಿಯನ್ನು 11.27 ಅಡಿ ಎತ್ತರಿಸಿ, ಎಡದಂಡೆ ಕಾಲುವೆಯನ್ನು 36.4 ಕಿ.ಮೀ ಹಾಗೂ ಬಲದಂಡೆ ಕಾಲುವೆಯನ್ನು 38.2 ಕಿ.ಮೀ ನಿರ್ಮಿಸುವ ಮೂಲಕ 21 ಸಾವಿರ ಎಕರೆ ಕೃಷಿ ಜಮೀನಿಗೆ ನೀರು ದೊರೆಕಿಸಿಕೊಡುವ ಯೋಜನೆಯನ್ನು ಸಿದ್ಧಪಡಿಸಿತ್ತು. ಆದರೆ, ಆ ಯೋಜನೆ ಅನುಷ್ಠಾನಗೊಳ್ಳಲಿಲ್ಲ, ನಂತರ ಯಾವುದೇ ಸರ್ಕಾರಗಳು ಇದರ ಬಗ್ಗೆ ಗಮನ ಹರಿಸಲಿಲ್ಲ’ ಎನ್ನುತ್ತಾರೆ ಮದಗ ಮಾಸೂರು ಕೆರೆ ಅಭಿವೃದ್ಧಿ ಹೋರಾಟ ಸಮಿತಿ ಮುಖಂಡ ನಿಂಗಪ್ಪ ಚಳಗೇರಿ.

‘ಪ್ರಸ್ತುತ ಮದಗ ಕೆರೆ ಹೂಳು ತುಂಬಿರುವುದರಿಂದ 0.5 ಟಿಎಂಸಿ ಅಡಿಗಿಂತ ಕಡಿಮೆ ನೀರು ಬಳಕೆಯಾಗುತ್ತಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ಕೆರೆ ಫೆಬ್ರುವರಿ ವೇಳೆಗೆ ನೀರಿಲ್ಲದಂತಾಗುತ್ತದೆ. ಕೆರೆಯ ಗಡಿಯನ್ನು ನಿಗದಿಪಡಿಸಿ, ಹೂಳು ತೆಗೆಸುವ ಕೆಲಸ ಮೊದಲು ಆಗಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗಿ ರೈತರಿಗೆ ಇನ್ನಷ್ಟು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ಬೇಕಿದೆ ಕಾಯಕಲ್ಪ

ಮಳೆಗಾಲದಲ್ಲಿ ಮದಗ ಕೆರೆಯಿಂದ ವ್ಯರ್ಥವಾಗಿ ಹರಿದು ಹೋಗುತ್ತಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಉತ್ತಮ ಯೋಜನೆ ರೂಪಿಸುವುದು ಅಗತ್ಯವಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಈ ಸ್ಥಳವನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಗಳು ಸಹ ಮೊಟಕುಗೊಂಡಿವೆ. ಅಗತ್ಯ ಮೂಲಭೂತ ಸವಲತ್ತುಗಳನ್ನು ಕಲ್ಪಿಸಿ ಕೆರೆಗೆ ಕಾಯಕಲ್ಪ ನೀಡಲು ಕ್ರಮಕೈಗೊಳ್ಳಬೇಕು ಎಂಬುದು ಈ ಭಾಗದ ಜನತೆಯ ಅಪೇಕ್ಷೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT