ಹಾವೇರಿ: ಜಿಲ್ಲೆಯಾದ್ಯಂತ ಮಹಿಳೆಯರು ತುಳಸಿ ಪೂಜೆಯನ್ನು ಗುರುವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಆಚರಿಸಿದರು. ತಮ್ಮ ಬೇಡಿಕೆ ಈಡೇರಿಕೆಗಾಗಿ ಭಗವಾನ್ ವಿಷ್ಣುವನ್ನು ಪ್ರಾರ್ಥಿಸಿದರು.
ಮನೆಗಳ ಮುಂಭಾಗ ತುಳಸಿ ಗಿಡದೊಂದಿಗೆ ಬೆಟ್ಟದ ನೆಲ್ಲಿಕಾಯಿ ಗಿಡಗಳನ್ನು ಇಟ್ಟು, ಪೂಜಿಸಿದರು. ಗಿಡಗಳಿಗೆ ಹೂವಿನ ಅಲಂಕಾರ, ದೀಪಾಲಂಕಾರ ಮಾಡಲಾಗಿತ್ತು. ಮನೆಯ ಅಂಗಳದಲ್ಲಿ ವಿಶೇಷ ರಂಗೋಲಿ ಚಿತ್ತಾರಗಳು ಗಮನ ಸೆಳೆದವು. ಮನೆಯ ಬಾಗಿಲು ಮಾವಿನ ತೋರಣ, ಹೂವಿನ ತೋರಣಗಳಿಂದ ಕಂಗೊಳಿಸಿದವು.
ತುಳಸಿ ಪೂಜೆ ಎಂಬುದು ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಾಗಿದೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ‘ಉತ್ಥಾನ ದ್ವಾದಶಿ’ ಎಂದು ಆಚರಿಸಲಾಗುತ್ತದೆ.
ನಗರದ ಎಂ.ಜಿ.ರಸ್ತೆ ಮತ್ತು ಮಾರುಕಟ್ಟೆಯಲ್ಲಿ ಗುರುವಾರ ಬೆಳಿಗ್ಗೆ ಬಾಳೆಕಂದು, ಮಾವಿನ ತೋರಣ, ಹುಣಸೆಹಣ್ಣು, ಬೆಟ್ಟದ ನೆಲ್ಲಿಕಾಯಿ, ಹೂವುಗಳ ಖರೀದಿ ಭರಾಟೆ ಕಂಡು ಬಂದಿತು. ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಕೆಲವು ಮಕ್ಕಳು ಸಡಗರದಿಂದ ದೀಪ ಬೆಳಗಿದರು.