ಹಾವೇರಿ: ‘ಭಾರತೀಯ ಇತಿಹಾಸದಲ್ಲಿ ಸಾಮ್ರಾಟ್ ಅಶೋಕ ಚಕ್ರವರ್ತಿಯು ಕಳಿಂಗ ಯುದ್ಧ ಗೆಲುವಿನ ನಂತರ ಲಕ್ಷಾಂತರ ಜನರ ಸಾವು–ನೋವು ರಕ್ತಪಾತವನ್ನು ಕಣ್ಣಾರೆ ಕಂಡು ಆಯುಧ(ಖಡ್ಗ)ಗಳನ್ನು ತ್ಯಾಗ ಮಾಡಿದ ದಿನವೇ ಆಯುಧ ಪೂಜೆಯಾಗಿದೆ ಎಂದು ಇತಿಹಾಸ ತಿಳಿಸುತ್ತದೆ’ ಎಂದು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಎನ್ ಗಾಳೆಮ್ಮನವರ ಹೇಳಿದರು.
ಇಲ್ಲಿನ ರಾಜೇಂದ್ರನಗರದ ಸಮತಾ ಸೈನಿಕ ದಳ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಚಂದ್ರಗುಪ್ತ ಮೌರ್ಯ ನ್ಯಾಷನಲ್ ಫೌಂಡೇಷನ್ ಹಾಗೂ ಜಿಲ್ಲಾ ಸಮತಾ ಸೈನಿಕ ದಳದ ವತಿಯಿಂದ ‘ಆಯುಧ ಪೂಜೆ ಮತ್ತು ವಿಜಯದಶಮಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಯುಧ ಪೂಜೆ ಮತ್ತು ವಿಜಯದಶಮಿ ಆಚರಣೆಯು ಧಾರ್ಮಿಕ ಸಂಕೇತವಾಗಿದೆ. ನಮ್ಮ ನಾಡಿನ ಗತವೈಭವದ ಹಬ್ಬವಾಗಿದೆ ಎಂದು ಐತಿಹಾಸಿಕ ಘಟನೆಗಳನ್ನು ಮೆಲುಕು ಹಾಕಿದರು.
ಹಿರಿಯ ಹೋರಾಟಗಾರರಾದ ಬಿ.ಐ ರಾಯಚೂರ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷರಾದ ಧರ್ಮಣ್ಣ ಕಿವಡನವರ ಅಧ್ಯಕ್ಷತೆ ವಹಿಸಿದ್ದರು. ಚಂದ್ರಗುಪ್ತ ಮೌರ್ಯ ನ್ಯಾಷನಲ್ ಫೌಂಡೇಷನ್ ಅಧ್ಯಕ್ಷರಾದ ಲಾವಣ್ಯ ಎನ್.ಜಿ.ದುರಗಪ್ಪ, ಎಂ.ಸುಶೀಲಾ ಕೋಮನಾಳ, ಹನುಮಂತಪ್ಪ ಕೆ.ರಮೇಶ ಇದ್ದರು.