ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಕಸ ವಿಲೇವಾರಿಗೆ ‘ನಾರಿ ಶಕ್ತಿ’

32 ಮಹಿಳೆಯರಿಗೆ ವಾಹನ ಚಾಲನಾ ತರಬೇತಿ: ಹಾವೇರಿ ಜಿ.ಪಂ ವಿನೂತನ ಕ್ರಮ
Last Updated 12 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಹಾವೇರಿ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಸ ವಿಲೇವಾರಿಗೆ ಬಳಸುವ ‘ಸ್ವಚ್ಛ ವಾಹಿನಿ’ ವಾಹನ ಚಾಲನೆಗೆ ಜಿಲ್ಲೆಯಲ್ಲಿ ಆಯ್ದ 32 ಮಹಿಳೆಯರಿಗೆ ತರಬೇತಿ ನೀಡುವ ಮೂಲಕ ಹಾವೇರಿ ಜಿಲ್ಲಾ ಪಂಚಾಯಿತಿ ವಿನೂತನ ಕ್ರಮ ಕೈಗೊಂಡಿದೆ.

‘ಸ್ವಚ್ಛ ಭಾರತ ಮಿಷನ್‌’ ಯೋಜನೆಯಡಿಘನ ತ್ಯಾಜ್ಯ ನಿರ್ವಹಣೆ ಅನುಷ್ಠಾನಕ್ಕೆ ಸಂಜೀವಿನಿ ಗ್ರಾಮ ಪಂಚಾಯಿತಿ ಮಹಿಳಾ ಒಕ್ಕೂಟಗಳ ಗುಂಪಿನ ಸದಸ್ಯರಿಗೆ ಹಾವೇರಿ ತಾಲ್ಲೂಕಿನ ದೇವಗಿರಿಯ ಬ್ಯಾಂಕ್‌ ಆಫ್‌ ಬರೋಡಾದ ‘ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆ’ಯಲ್ಲಿ (ಆರ್‌ಸೆಟಿ) ತರಬೇತಿ ನೀಡಲಾಗುತ್ತಿದೆ.

‘ಒಂದು ತಿಂಗಳ ತರಬೇತಿ ಅವಧಿಯಲ್ಲಿ ಪ್ರತಿ ಮಹಿಳೆಯು ನಿತ್ಯ 6 ಕಿ.ಮೀ. ವಾಹನ ಚಾಲನಾ ತರಬೇತಿ ಪಡೆಯುತ್ತಿದ್ದಾರೆ. ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿದ್ದೇವೆ. ಅಷ್ಟೇ ಅಲ್ಲದೆ, ಜೀವನ ಕೌಶಲಗಳು ಮತ್ತು ಬ್ಯಾಂಕಿಂಗ್‌ ಸೇವೆಯ ಬಗ್ಗೆಯೂ ತರಬೇತಿ ನೀಡುತ್ತಿದ್ದೇವೆ’ ಎಂದು ಆರ್‌ಸೆಟಿ ಸಂಸ್ಥೆಯ ನಿರ್ದೇಶಕ ಶಾಜಿತ್‌ ಎಸ್‌. ತಿಳಿಸಿದರು.

ಮಹಿಳಾ ಸಬಲೀಕರಣ:

‘ಜಿಲ್ಲೆಯ 170 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ಮಾಡಿ, ಮಹಿಳಾ ಒಕ್ಕೂಟಗಳ ಗುಂಪಿನ ಸದಸ್ಯರಿಂದಲೇ ನಡೆಸಲು ನಿರ್ಧರಿಸಿದ್ದೇವೆ. ಮನೆ–ಮನೆಗಳಿಂದ ಕಸವನ್ನು ಸಂಗ್ರಹಿಸಿ, ವಿಂಗಡಿಸಿ, ಗೊಬ್ಬರ ಉತ್ಪಾದನೆ ಮಾಡಿ, ಮಾರಾಟ ಮಾಡುವವರೆಗೆ ಎಲ್ಲ ಕೆಲಸಗಳನ್ನು ಮಹಿಳೆಯರೇ ನಿರ್ವಹಣೆ ಮಾಡಲಿದ್ದಾರೆ’ ಎಂದು ಹಾವೇರಿ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪುರುಷ ಚಾಲಕರ ಮೇಲಿನ ಅವಲಂಬನೆ ತಪ್ಪಿಸಲು 18 ರಿಂದ 45 ವರ್ಷದೊಳಗಿನ ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ನೀಡುತ್ತಿದ್ದೇವೆ.ತರಬೇತಿ ಪಡೆದವರಿಗೆ ಡಿ.ಎಲ್‌ ಕೊಡಿಸಿ, ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಕಲ್ಪಿಸುತ್ತೇವೆ’ ಎಂದರು.

109 ಆಟೊ ಟಿಪ್ಪರ್‌ ಹಸ್ತಾಂತರ:

ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ₹5.83 ಕೋಟಿ ವೆಚ್ಚದಲ್ಲಿ ಜಿಲ್ಲೆಯ 109 ಗ್ರಾಮ ಪಂಚಾಯಿತಿಗಳಿಗೆ 109 ಆಟೊ ಟಿಪ್ಪರ್‌ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಚೆಗೆ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಚಾಲನಾ ಪರವಾನಗಿ ಪಡೆದ ಮಹಿಳೆಯರು ಈ ವಾಹನಗಳನ್ನು ಚಾಲನೆ ಮಾಡಲಿದ್ದಾರೆ.

‘ಸ್ವಚ್ಛತಾ ಸೇನಾನಿ’ಗಳಾದ ಪದವೀಧರೆಯರು

ಕಸ ವಿಲೇವಾರಿ ವಾಹನ ಓಡಿಸಲು ಗೋಪಿಣಿ ಗಿಡ್ಡಣ್ಣವರ ಮತ್ತು ಸುಧಾ ಪೂಜಾರ್‌ ಎಂಬ ಇಬ್ಬರು ಪದವೀಧರೆಯರು ಉತ್ಸಾಹ ತೋರುವ ಮೂಲಕ ‘ಸ್ವಚ್ಛತಾ ಸೇನಾನಿ’ಗಳಾಗಿ ಮುಂದೆ ಬಂದಿದ್ದಾರೆ.

ಎಂಎ, ಡಿಇಡಿ ವ್ಯಾಸಂಗ ಮಾಡಿರುವ ರಾಣೆಬೆನ್ನೂರು ತಾಲ್ಲೂಕು ಚಳಗೇರಿ ಗ್ರಾಮದ ಗೋಪಿಣಿ ಗಿಡ್ಡಣ್ಣವರ ಕೆಲವು ವರ್ಷ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ‘ಯಾವ ಕೆಲಸವೂ ಕೀಳಲ್ಲ. ಕೆಲಸ ಮಾಡಲು ಮನಸ್ಸು ಮುಖ್ಯ’ ಎಂಬುದು ಗೋಪಿಣಿ ಅವರ ಅಭಿಮತ.

* ಗ್ರಾಮಗಳ ನೈರ್ಮಲ್ಯಕ್ಕೆ ‘ಮಹಿಳಾ ಶಕ್ತಿ’ ಸಿಕ್ಕಿದೆ. ಮಹಿಳೆಯರು ಮನೆಗಳ ಜತೆ ಹಳ್ಳಿಗಳನ್ನೂ ಸ್ವಚ್ಛಗೊಳಿಸಿ, ಸುಂದರಗೊಳಿಸಲಿದ್ದಾರೆ

-ಮೊಹಮ್ಮದ್‌ ರೋಶನ್‌, ಸಿಇಒ, ಹಾವೇರಿ ಜಿಲ್ಲಾ ಪಂಚಾಯಿತಿ

* ಹಳ್ಳಿಗಳಲ್ಲಿ ಸೈಕಲ್‌, ಬೈಕ್‌ ಓಡಿಸಲು ಹುಡುಗರಿಗೆ ಪ್ರಾಶಸ್ತ್ಯ ನೀಡಿ, ಹುಡುಗಿಯರನ್ನು ಕಡೆಗಣಿಸುತ್ತಾರೆ. ನಾನೀಗ ಆಟೊ ಟಿಪ್ಪರ್‌ ಓಡಿಸುತ್ತೇನೆ.

-ಸುಧಾ ಪೂಜಾರ್‌, ಪದವೀಧರೆ, ಚಿಕ್ಕಲಿಂಗದಹಳ್ಳಿ, ಹಾವೇರಿ ತಾ.,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT