ಸವಣೂರ:ತಾಲ್ಲೂಕಿನ ತೆಗ್ಗಿಹಳ್ಳಿ ಗ್ರಾಮ ಪಂಚಾಯ್ತಿಯ ಗುಂಡೂರ ಗ್ರಾಮದಲ್ಲಿ ನರೇಗಾ ಅಡಿ ನಡೆಯುತ್ತಿರುವ ‘ಕೆರೆಗೆ ಮಳೆ ನೀರು ತುಂಬಿಸುವ ಕಾಲುವೆ’ ದುರಸ್ತಿ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿದ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೆ.ಲೀಲಾವತಿ, ಕಾರ್ಮಿಕರ ಜೊತೆ ಮಣ್ಣಿನ ಬುಟ್ಟಿ ಹೊತ್ತುಕೊಂಡು ಪ್ರೋತ್ಸಾಹ ನೀಡಿದರು. ಬಳಿಕ ಉದ್ಯೋಗ ಚೀಟಿ ವಿತರಿಸಿದರು.
‘ಬರದ ಛಾಯೆಯ ಕಾರಣ ನರೇಗಾ ಕಾಮಗಾರಿ ಹೆಚ್ಚಿಸಲಾಗಿದೆ. ಜನ ವಲಸೆ ಹೋಗುವ ಬದಲಾಗಿ, ಹೊಲಗಳಿಗೆ ಬದು ನಿರ್ಮಾಣ, ಕೆರೆ ಹೂಳೆತ್ತುವುದು, ಕಾಲುವೆ ದುರಸ್ತಿ, ಕೃಷಿ ಹೊಂಡ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಬಹುದು. ಅದರ ಸದುಪಯೋಗ ಪಡೆದುಕೊಂಡು, ಸ್ವಗ್ರಾಮದಲ್ಲೇ ಜೀವನ ನಡೆಸಿ ಎಂದರು.
ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಎಸ್.ಎಂ.ಡಿ. ಇಸ್ಮಾಯಿಲ್ ಮಾತನಾಡಿ,ಕೆರೆ ಅಭಿವೃದ್ಧಿ ಕಾಮಗಾರಿ ಯೋಜನೆಯನ್ನು ಸುಮಾರು ₹5 ಲಕ್ಷದಲ್ಲಿ ಪ್ರಾರಂಭಿಸಲಾಗಿದೆ. ಸುಮಾರು 19 ಕುಟುಂಬಗಳ 36 ಜನ ಕೂಲಿ ಮಾಡುತ್ತಿದ್ದಾರೆ ಎಂದರು.
ಅಧಿಕಾರಿಗಳಾದ ಸದಾನಂದ ಅಮರಾಪೂರ, ವಿಜಯಲಕ್ಷ್ಮಿ ಗಣತಿ, ಯೋಗೇಶ ಚಾಕರಿ, ಚಂದ್ರು ಲಮಾಣಿ, ಭೋಜರಾಜ ಲಮಾಣಿ, ಎಂ.ಕೆ.ಬಡಿಗೇರ, ರವಿ ಗಾಣಗೇರ, ಎಸ್. ಶೈಲಾ, ಗೀತಾ ಕರೆಮ್ಮನವರ, ದೇವರಾಜ ಚವ್ವಾಣ, ಪರಮೇಶ ಸಂಕಮ್ಮನವರ ಹಾಗೂ ಗುಂಡೂರಇ ಇದ್ದರು.