ಹಾವೇರಿ: ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕೆಯಲ್ಲಿ ರಟ್ಟೀಹಳ್ಳಿ ತಾಲ್ಲೂಕಿನ ಮಹಿಳೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಗಂಟಲು ದ್ರವದ ಮಾದರಿಯನ್ನು ಶಿವಮೊಗ್ಗದ ವೈರಾಲಜಿ ಸಂಸ್ಥೆಗೆ ಕಳುಹಿಸಿಕೊಡಲಾಗಿದೆ.
‘ಶಂಕಿತ ಮಹಿಳೆಯೂ ಉಮ್ರಾಹ್ (ಮೆಕ್ಕಾ ಮತ್ತು ಮದಿನಾ ಭೇಟಿ) ಯಾತ್ರೆ ಮುಗಿಸಿ ಸೋಮವಾರ ಪಟ್ಟಣಕ್ಕೆ ಆಗಮಿಸಿದ್ದರು. ಅವರಿಗೆ ಕೋವಿಡ್–19 ಜ್ವರದ ಲಕ್ಷಣ ಕಂಡು ಬಂದಿದ್ದರಿಂದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾಗರಾಜ ನಾಯಕ ತಿಳಿಸಿದರು.
ಅಲ್ಲದೆ, ವಿವಿಧ ದೇಶದಿಂದ ಜಿಲ್ಲೆಗೆ ಆಗಮಿಸಿದ 29 ಜನರು ಸ್ವಯಂ ಪ್ರೇರಿತವಾಗಿ ತಪಾಸಣೆಗೆ ಒಳಗಾಗಿದ್ದಾರೆ. ಅವರಲ್ಲಿ ಯಾವುದೇ ಲಕ್ಷಣ ಕಂಡುಬರದ ಕಾರಣ ಮುಂಜಾಗ್ರತಾ ಕ್ರಮವಾಗಿ ಯಾರ ಸಂಪರ್ಕಕ್ಕೂ ಒಳಗಾಗದೆ ಗೃಹ ಬಂಧನದಲ್ಲಿರುವಂತೆ ಸಲಹೆ ನೀಡಲಾಗಿದ್ದು, ಅವರ ಮೇಲೆ ನಿಗಾ ಇಡಲಾಗಿದೆ ಎಂದು ಮಾಹಿತಿ ನೀಡಿದರು.
ಸೋಂಕು ದೃಢಪಟ್ಟಿಲ್ಲ: ಮೆಕ್ಕಾ ಮತ್ತು ಮದಿನಾ ಪ್ರವಾಸದಿಂದ ಹಾನಗಲ್ ತಾಲ್ಲೂಕಿಗೆ ವಾಪಸ್ಸಾಗಿದ್ದ, ಶಂಕಿತರಿಬ್ಬರಗಂಟಲು ದ್ರವದ ಮಾದರಿಯ ವರದಿ ನೆಗೆಟಿವ್ ಬಂದಿದೆ ಎಂಬುದನ್ನು ಲ್ಯಾಬ್ ವರದಿ ಖಚಿತ ಪಡಿಸಿದೆ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದರು.