ತಿಕೋಟಾ: ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳ ತುಂಬಿ ಹರಿಯುತ್ತಿದೆ.
ಸತತ 2–3 ವರ್ಷಗಳಿಂದ ಬರಗಾಲದಿಂದಾಗಿ ಹಳ್ಳ ಬತ್ತಿಹೋಗಿತ್ತು. ಆದರೆ, ಭಾನುವಾರ ರಾತ್ರಿ ಸುರಿದ ಮಳೆಗೆ ಮೈದುಂಬಿ ಹರಿಯುತ್ತಿದೆ.
ಸೋಮವಾರ ಸಂಗಮನಾಥ ದೇವರ ವಾರದ ರುದ್ರಾಭಿಷೇಕ ಸಮಯ. ಮಳೆಯಿಂದಾಗಿ ಗರ್ಭಗುಡಿಯಲ್ಲಿ ನೀರು ನುಗ್ಗಿದ್ದು, ಮಳೆಯಲ್ಲೇ ಅರ್ಚಕರು ಪೂಜೆ ಸಲ್ಲಿಸಿದರು. ಪೂಜಾ ಕಾರ್ಯಕ್ರಮ, ಮಂತ್ರ ಪಠಣವನ್ನು ದೇವಸ್ಥಾನದ ಹೊರಗಡೆ ನಡೆಸಿದರು. ದೇವಸ್ಥಾನದ ಹೊರಗಡೆ ಇಟ್ಟಿದ್ದ ದೇವರ ಪಲ್ಲಕ್ಕಿ ಹಳ್ಳದಲ್ಲಿ ಹರಿದು ಹೋಗಿದೆ.
ರೈತರಲ್ಲಿ ಸಂತಸ: ಭಾರಿ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ದ್ರಾಕ್ಷಿ ಬೆಳೆಗಾರರ ಪಾಲಿಗೆ ಮಳೆ ವರವಾಗಿದೆ. ರೈತರು ದ್ರಾಕ್ಷಿ ಕಠಾವು ಪ್ರಾರಂಭಿಸಿದ್ದಾರೆ.
ಕಳ್ಳಕವಟಗಿ, ಘೋಣಸಗಿ, ಬಾಬಾನಗರ, ತಿಕೋಟಾ, ಬಿಜ್ಜರಗಿ, ಹುಬನೂರ, ಟಕ್ಕಳಕಿ, ಸೋಮದೇವರಹಟ್ಟಿ ಸೇರಿದಂತೆ ಅನೇಕ ಕಡೆ ಉತ್ತಮ ಮಳೆಯಾಗಿದೆ. ಹಳ್ಳ– ಕೊಳ್ಳಗಳು ತುಂಬು ಹರಿಯುತ್ತಿವೆ.