ಪಟ್ನಾ: ಮದುವೆ ಹಿಂದಿನ ದಿನ ಕಾನ್ಸ್ಟೆಬಲ್ ಹುದ್ದೆ ಸಿಕ್ಕಿತೆಂದು ಮದುಮಗನೊಬ್ಬ ವರದಕ್ಷಿಣೆಯ ಮೊತ್ತವನ್ನು ₹7ಲಕ್ಷದಿಂದ ದಿಢೀರನೇ ₹10ಲಕ್ಷಕ್ಕೆ ಏರಿಸಿ, ಮದುವೆಯನ್ನು ಮುರಿದಿರುವ ಘಟನೆ ಇಲ್ಲಿಯ ನಾವಾಡ ಜಿಲ್ಲೆಯಲ್ಲಿ ನಡೆದಿದೆ.
ವರದಕ್ಷಿಣೆಯಂಥ ಪಿಡುಗನ್ನು ನಿರ್ಮೂಲನ ಮಾಡಲು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಹರಸಾಹಸ ಪಡುತ್ತಿರುವ ಬೆನ್ನಲ್ಲೇ, ಇಂಥದ್ದೊಂದು ಘಟನೆ ನಡೆದಿದೆ.
ಕೊನೆಯ ಕ್ಷಣದಲ್ಲಿ ವಧುವಿನ ಕಡೆಯವರಿಗೆ ಅಷ್ಟು ಹಣ ಹೊಂದಿಸಲು ಸಾಧ್ಯವಾಗದ್ದರಿಂದ ಮದುವೆಯನ್ನೇ ವರನ ಕಡೆಯವರು ರದ್ದು ಮಾಡಿದ್ದು, ‘ನ್ಯಾಯ’ ಕೋರಿ ಪೊಲೀಸರ ಮೊರೆ ಹೋದ ವಧುವಿಗೆ ಅಲ್ಲೂ ಸಮಾಧಾನ ಸಿಕ್ಕಿಲ್ಲ.
ಮದುವೆಯ ಮಾತುಕತೆಯ ಸಂದರ್ಭದಲ್ಲಿ ₹4ಲಕ್ಷವನ್ನು ನಗದು ರೂಪದಲ್ಲಿ ಹಾಗೂ ₹3ಲಕ್ಷವನ್ನು ಆಭರಣದ ರೂಪದಲ್ಲಿ ನೀಡುವ ಮಾತುಕತೆ ನಡೆದಿತ್ತು. ಅದರಂತೆ ₹4ಲಕ್ಷವನ್ನು ವರನ ಕಡೆಯವರಿಗೆ ವಧುವಿನ ಪೋಷಕರು ನೀಡಿದ್ದರು, ಆಭರಣಗಳ ಖರೀದಿಯೂ ಆಗಿತ್ತು. ಇನ್ನೇನು ಆ ಆಭರಣಗಳನ್ನು ಮದುವೆಯ ದಿನ ವರನಿಗೆ ನೀಡಬೇಕಿತ್ತು.
ಮದುವೆಯ ಖುಷಿಯಲ್ಲಿದ್ದ ಆ ಕುಟುಂಬಕ್ಕೆ ಬರಸಿಡಿಲು ಬಡಿದದ್ದು ವರನ ಕಡೆಯವರು ಕೊನೇ ಗಳಿಗೆಯಲ್ಲಿ ₹3ಲಕ್ಷವನ್ನು ಹೆಚ್ಚುವರಿಯಾಗಿ ನೀಡುವಂತೆ ಕೇಳಿದಾಗ... ಕಾರಣ ಕೇಳಿದಾಗ ಅಂದು ಅವನಿಗೆ ಕಾನ್ಸ್ಟೆಬಲ್ ಹುದ್ದೆ ಸಿಕ್ಕಿತ್ತು. ತನ್ನ ‘ಘನತೆ’ಗೆ ತಕ್ಕಷ್ಟು ವರದಕ್ಷಿಣೆ ಪಡೆಯಬೇಕು ಎಂದು ಅದರ ಮೊತ್ತವನ್ನು ಏರಿಸಿದ್ದ. ಆದರೆ ಅಷ್ಟು ಹಣ ವಧುವಿನ ಕಡೆಯವರ ಬಳಿ ಇರಲಿಲ್ಲ. ಅಷ್ಟು ಹಣ ಕೊಡಲು ಕಷ್ಟವಾಗುತ್ತದೆ ಎಂದು ಮದುಮಗಳ ಪೋಷಕರು ಹೇಳುತ್ತಿದ್ದಂತೆಯೇ ‘ಹಾಗಿದ್ದರೆ ನಿಮ್ಮ ಮಗಳು ನಮಗೆ ಬೇಡ’ ಎಂದ ವರನ ಕಡೆಯವರು ಮದುವೆಯನ್ನೇ ರದ್ದು ಮಾಡಿದರು!
ಮದುವೆ ರದ್ದಾದ ವಿಷಯ ತಿಳಿಯದಿದ್ದ ವಧುವಿನ ಕಡೆಯವರು, ವರನ ಕಡೆಯವರ ಮೆರವಣಿಗೆ (ಬಾರಾತ್) ಬರುತ್ತದೆ ಎಂದು ನಿರೀಕ್ಷೆ ಮಾಡುತ್ತಿದ್ದರು. ಆದರೆ ನಂತರದಲ್ಲಿ ಅವರಿಗೆ ವಿಷಯ ತಿಳಿಯಿತು. ವರನ ಪೋಷಕರ ಬಳಿ ಎಷ್ಟೇ ಅಂಗಲಾಚಿದರೂ ಉಳಿದ ಹಣ ನೀಡಿದರೆ ಮಾತ್ರವೇ ಮದುವೆ ನಡೆಯುವುದಾಗಿ ಹೇಳಿದರು.
ಮದುವೆ ಮುಗಿರಿದ ಬಗ್ಗೆ ಆಘಾತಗೊಂಡ ವಧು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಳು. ಆದರೆ ಅದನ್ನು ಸ್ವೀಕರಿಸದ ಪೊಲೀಸರು, ಗ್ರಾಮದ ಮುಖ್ಯಸ್ಥರೇ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದಿದ್ದಾರೆ.