ಕಡಗಂಚಿ (ಕಲಬುರ್ಗಿ): ‘ಅಳಿವಿನಂಚಿನಲ್ಲಿರುವ 11 ಭಾಷೆಗಳ ಬಗ್ಗೆ 11 ಪುಸ್ತಕಗಳನ್ನು ಹೊರತಂದಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಪ್ರಶಂಸಿಸಿದರು.
ಸಿಯುಕೆನಲ್ಲಿ ಗುರುವಾರ ನಡೆದ ಪ್ರಸಾರಾಂಗ ಕಚೇರಿಯ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪ್ರಸಾರಾಂಗವೇ ವಿಶ್ವವಿದ್ಯಾಲಯದ ಹೃದಯ ಇದ್ದ ಹಾಗೆ. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗವು ವಿಶ್ವವಿದ್ಯಾಲಯದ ಒಳಗೆ ಮತ್ತು ಹೊರಗೆ ಜ್ಞಾನವನ್ನು ಪ್ರಸಾರ ಮಾಡುವ ಮೂಲಕ ಅದ್ಭುತ ಕಾರ್ಯ ಮಾಡುತ್ತಿದೆ. ಅದರಂತಯೇ ಕೇಂದ್ರೀಯ ವಿಶ್ವವಿದ್ಯಾಲಯ ಶ್ಲಾಘನೀಯ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಕುಲಪತಿ ಪ್ರಭಾರಿ ಪ್ರೊ.ಎಂ.ವಿ. ಅಲಗವಾಡಿ ಮಾತನಾಡಿ, ‘ವಿಶ್ವವಿದ್ಯಾಲಯಗಳನ್ನು ಮೀರಿ ಜ್ಞಾನವನ್ನು ಹರಡಲು ಪ್ರಸಾರಾಂಗ ಬಹಳ ಅಗತ್ಯ. ಪ್ರಸಾರಾಂಗ ವಿಶ್ವವಿದ್ಯಾಲಯ ಮತ್ತು ಸಮಾಜದ ನಡುವಿನ ಸೇತುವೆಯಾಗಿ ಕೆಲಸ ಮಾಡಬೇಕು. ಭವಿಷ್ಯದಲ್ಲಿ ಸಿಯುಕೆ ಅಧ್ಯಾಪಕರ ಸಂಶೋಧನಾ ಕೃತಿಗಳನ್ನು ಪ್ರಕಟಿಸುತ್ತದೆ ಮತ್ತು ಅದನ್ನು ಸಾಮಾನ್ಯ ಜನರಿಗೆ ಲಭ್ಯವಾಗಿಸುತ್ತದೆ’ ಎಂದು ಹೇಳಿದರು.
ಕುಲಸಚಿವ ಪ್ರೊ.ಬಸವರಾಜ್ ದೋನೂರ್ ಅವರು ಪರಿಚಯಾತ್ಮಕ ಭಾಷಣ ಮಾಡಿ, ‘ಪ್ರಸಾರಾಂಗವನ್ನು ಹೊಂದಬೇಕೆಂಬುದು ನಮ್ಮ ಕನಸಾಗಿತ್ತು. ಅದು ಇಂದು ನನಸಾಗಿದೆ. ಪ್ರಸಾರಾಂಗ ತನ್ನ ಕೃತಿಗಳನ್ನು ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತಗೊಳಿಸಬಾರದು. ಆದರೆ, ಇತರ ವಿಭಾಗಗಳ ಪುಸ್ತಕಗಳನ್ನು ಪ್ರಕಟಿಸಬೇಕು’ ಎಂದರು.
ಪ್ರಸಾರಾಂಗದ ನಿರ್ದೇಶಕ ಪ್ರೊ.ವಿಕ್ರಮ್ ವಿಶಾಜಿ, ಅಳಿವಿನಂಚಿನಲ್ಲಿರುವ ಭಾಷೆಗಳ ಕೇಂದ್ರದ ಸಂಯೋಜಕ ಡಾ.ಅಂಕಿತಾ ಸತಪತಿ ಕೃತಿಗಳನ್ನು ಪರಿಚಯಿಸಿದರು.